ಮುಂಬಯಿ: ನ.15: ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂಬಯಿ ಸಮಿತಿ ಇಂದಿಲ್ಲಿ ಭಾನುವಾರ ಸಂಜೆ ಕುರ್ಲ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವಿಧ್ಯುಕ್ತವಾಗಿ ಲೋಕಾರ್ಪಣೆ ಗೊಳಿಸಲ್ಪಟ್ಟಿತು. ಫೌಂಡೇಶನ್ನ ಸಂಸ್ಥಾಪಕ, ಪ್ರಸಿದ್ಧ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರ ಸಾರಥ್ಯದಲ್ಲಿ ನೆರವೇರಿಸಲ್ಪಟ್ಟ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂಬಯಿ ಸಮಿತಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಫೌಂಡೇಶನ್ ಮುಂಬಯಿ ಸಮಿತಿಯನ್ನು ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ಸೇವಾರ್ಪಣೆಗೊಳಿಸಿದರು.


ಈ ಶುಭಾವಸರದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಉದ್ಯಮಿಗಳಾದ ಜಯ ಸಿ.ಸುವರ್ಣ, ದಡ್ದಂಗಡಿ ಚೆಲ್ಲಡ್ಕ ಕುಸುಮೋದರ ಡಿ.ಶೆಟ್ಟಿ, ಇನ್ನ ಕುರ್ಲಬೆಟ್ಟು ಸಂತೋಷ್ ಶೆಟ್ಟಿ (ಪುಣೆ), ಪೋಲಿಸ್ ಅಧಿಕಾರಿ ಪ್ರಕಾಶ್ ಬಿ.ಭಂಡಾರಿ, ಲತಾ ಜಯರಾಮ ಶೆಟ್ಟಿ ಉಪಸ್ಥಿತರಿದ್ದು, ಯಕ್ಷಕಲೆಗೆ ಅನುಪಮ ಸೇವೆಗೈದ ಕಲಾರಾಧಕ, ಕಟೀಲು ಶ್ರೀ ದುರ್ಗ ಪರಮೇಶ್ವರಿ ದಶವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ವ್ಯವಸ್ಥಾಪಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರಿಗೆ ಸನ್ಮಾನಿಸಿ ಗೌರವಿಸಿದರು. ಅಂತೆಯೇ ಕರ್ನೆರೆ ವಿಶ್ವನಾಥ ಶೆಟ್ಟಿ ಮತ್ತು ಶ್ರೀಮತಿ ಲತಾ ವಿಶ್ವನಾಥ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಿದರು.
ಐಕಳ ಗಣೇಶ್ ಶೆಟ್ಟಿ ಮತ್ತು ಅಶೋಕ್ ಶೆಟ್ಟಿ ಪೆರ್ಮುದೆ ಇವರ ಸಂಯೋಜಕತ್ವದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂಬಯಿ ಸಮಿತಿಯ ಗೌರವಾಧ್ಯಕ್ಷರುಗಳಾದ ಐಕಳ ಹರೀಶ್ ಶೆಟ್ಟಿ, ಸುರೇಶ್ ಎಸ್.ಭಂಡಾರಿ ಕಡಂದಲೆ, ಉಪಾಧ್ಯಕ್ಷರುಗಳಾದ ಎರ್ಮಳ್ ಹರೀಶ್ ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ರವೀಂದ್ರನಾಥ ಎಂ.ಭಂಡಾರಿ, ಇಂದ್ರಾಳಿ ದಿವಾಕರ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಅಶೋಕ್ ಪಕ್ಕಳ, ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ಜೊತೆ ಕಾರ್ಯದರ್ಶಿ ಕರ್ನೂರು ಮೋಹನ್ ರೈ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಆರು ಮೇಳಗಳ
ಹೆಸರಾಂತ ಹಿಮ್ಮೇಳ ಮುಮ್ಮೇಳಗಳ ಕಲಾವಿದರ ಸಂಗಮದಲ್ಲಿ ಪ್ರಸಿದ್ಧ ಭಾಗವತ ಸತೀಶ್ ಶೆಟ್ಟಿ ಪಟ್ಲ ಭಾಗವತಿಕೆ ಯಲ್ಲಿ ಯಕ್ಷಗಾನದ ಸವ್ಯಸಾಚಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಯಕ್ಷಕಾಣಿಕೆಯಾಗಿಸಿ `ಮಾನಿಪಾದ’ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್














