ಬಂಟ್ವಾಳ: ಶಿಕ್ಷಣ ಎನ್ನುವುದು ಒಂದು ಪ್ರಬಲವಾದ ಶಕ್ತಿ. ದುರ್ಬಲರ ಪಾಲಿಗೆ ಇದೊಂದು ಅಸ್ತ್ರವಿದ್ದಂತೆ, ರಕ್ಷಣೆಗೆ ಬೇಕಾದ ಬಂದೂಕಿನಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳ ಬಡ್ಡಕಟ್ಟೆಯ ದೈವಗುಡ್ಡೆ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಸ್ಥಳೀಯ ಪ್ರತಿಬಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಉನ್ನತಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಮಾನವ ಸಂಪನ್ಮೂಲ ಬಲಿಷ್ಠವಾಗಲು ಸಾಧ್ಯ, ಸರ್ವಧರ್ಮದ, ಸರ್ವಜಾತಿಯ ಜನರು ಬಲಿಷ್ಠರಾದಾಗ ಸುಂದರ ಸಮಾಜ ನಿರ್ಮಾಣವಗಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಕೆಲಸವಗಬೇಕು. ಅದುವೇ ಶಾಶ್ವತವಾದ ಸಂಪತ್ತು ಎಂದು ಅವರು ಅಭಿಪ್ರಾಯ ಪಟ್ಟರು. ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದೈವಗುಡ್ಡೆ ಫ್ರೆಂಡ್ಸ್ ಸದಸ್ಯರು ತಮ್ಮ ಸಂಪಾದನೆಯ ಒಂದು ಭಾಗವನ್ನು ವಿದ್ಯಾರ್ಥಿ ವೇತನವಾಗಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಂಚಯಗಿರಿ ರಾಣಿಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕರಾಮ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ದ.ಕ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಯಾವುದೇ ಕೊರತೆಯಿಲ್ಲ. ಆದರೆ ಕನಿಷ್ಠ ಸಂಸ್ಕರ, ಕನಿಷ್ಟ ಸಂಸ್ಕøತಿ ಇಲ್ಲದ ಸ್ಥಿತಿಯಲ್ಲಿ ನಾವಿದ್ದೇವೆ ಎಂದರು.
ಪುರಸಭೆ ಉಪಾಧ್ಯಕ್ಷೆ ಯಾಸ್ಮೀನ್, ಸದಸ್ಯರಾದ ಸದಾಶಿವ ಬಂಗೇರಾ, ಗಂಗಾಧರ, ತಹಶೀಲ್ದಾರ್ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ವೆಂಕಪ್ಪ ಪೂಜಾರಿ, ಸಂಜೀವ ಬಂಗೇರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪುರಸಭಾ ಸದಸ್ಯ ಪ್ರವೀಣ್ ಬಿ.ಸ್ವಾಗತಿಸಿ, ಪುರಸಭಾ ಮಾಜಿ ಸದಸ್ಯ ಉದಯ ಕುಮಾರ್ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
