ಬಂಟ್ವಾಳ: ಪ್ರಾಚೀನ ಸನಾತನ ಹಿಂದೂ ಸಂಸ್ಕೃತಿಯನ್ನು ಅರಿತು ಧಾರ್ಮಿಕ ಉತ್ಸವ ಮತ್ತಿತರ ಆಚರಣೆಗಳನ್ನು ನಡೆಸಿದಾಗ ಮಾತ್ರ ಯುವಜನತೆಗೆ ಹಿಂದೂ ಸಂಸ್ಕೃತಿ ವೈಶಿಷ್ಟ್ಯ ತಿಳಿಯುತ್ತದೆ. ಇದಕ್ಕಾಗಿ ಇಲ್ಲಿನ ಹಿಂದೂ ಧರ್ಮೊತ್ಥಾನ ವೇದಿಕೆ ಮತ್ತಿತರ ಸಂಘಟನೆಗಳ ಮೂಲಕ ನಿರಂತರ ಧಾರ್ಮಿಕ ಚಟುವಟಿಕೆ ನಡೆಯಬೇಕು ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.

ತಾಲ್ಲೂಕಿನ ರಾಯಿ-ಕೊಯಿಲ-ಅರಳ ಹಿಂದೂ ಧರ್ಮೊತ್ಥಾನ ವೇದಿಕೆ ಟ್ರಸ್ಟ್ ಮತ್ತು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನ ಬಳಿ ಗುರುವಾರ ನಡೆದ 13ನೇ ವರ್ಷದ ಶಾರದೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಹಿಂದೂ ದೇಶದಲ್ಲಿ ಚೈತನ್ಯಶೀಲ ಧರ್ಮವಿದ್ದು ಎಲ್ಲೆಡೆ ಶಾರದೆಯ ಆರಾದನೆ ನಡೆಯುತ್ತಿದ್ದರೂ ಶಾರದೆಯ ಮೂಲ ಸ್ಥಾನ ಜಮ್ಮು-ಕಾಶ್ಮೀರದಲ್ಲಿ ಶಾರದೆಯ ದೇಗುಲ ಬದಲಾಗಿ ಅಕ್ರಮ ಕಸಾಯಿಖಾನೆಗಳು ಹೆಚ್ಚಳವಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಭಟ್ ಮಾದೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಕಳ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಮಾತನಾಡಿ, ಹಿಂದೂಗಳು ಪರಧರ್ಮ ಸಹಿಷ್ಣುಗಳಾಗಿ ಶಾಂತಿ ಮತ್ತು ಸಹಬಾಳ್ವೆ ಬಯಸುತ್ತಾರೆ. ಅಕ್ರಮ ಗೋಸಾಗಾಟ ವಿರುದ್ಧ ಹೋರಾಟ ನಡೆಸಿದ ಕಾರ್ಯಕರ್ತ ಪ್ರಶಾಂತ ಪೂಜಾರಿ ಅಮಾನುಷವಾಗಿ ಹಂತಕರಿಗೆ ಬಲಿಯಾಗಿರುವುದು ವಿಪರ್ಯಾಸ ಎಂದರು.
ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಮಿತಿ ಗೌರವಾಧ್ಯಕ್ಷರಾದ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಉಳಿಪಾಡಿಗುತ್ತು ರಾಜೇಶ್ ನಾಯ್ಕ್ , ರಾಜ್ಯ ಬಾಲಭವನ ಸೊಸೈಟಿ ಮಾಜಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಮತ್ತಿತರರು ಶುಭ ಹಾರೈಸಿದರು.
ಉದ್ಯಮಿಗಳಾದ ಸಂತೋಷ್ ಶೆಟ್ಟಿ ಅರೆಬೆಟ್ಟು, ಲೋಕೇಶ್ ಪೆದಮಲೆ, ಸಮತಿ ಗೌರವ ಸಲಹೆಗಾರ ದೇವಪ್ಪ ಶೆಟ್ಟಿ ಮಾವಂತೂರು, ಟ್ರಸ್ಟಿನ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು, ಸಮಿತಿ ಅಧ್ಯಕ್ಷ ಜಯಂತ ಪೂಜಾರಿ ಪಿಲ್ಕಾಜೆ, ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಸಪಲ್ಯ, ಅರಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಂಗಮ್ಮ ಮತ್ತಿತರರು ಇದ್ದರು.
ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಡೊಂಬಯ ಬಿ.ಅರಳ ಸ್ವಾಗತಿಸಿ, ಗೌರವ ಸಲಹೆಗಾರ ವಸಂತ ಕುಮಾರ್ ಅಣ್ಣಳಿಕೆ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
