ಉಳ್ಳಾಲ: ಬೈಕ್ ಹಾಗೂ ಇನ್ನೋವಾ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಚ್ಚಿಲ ಸಂಕೊಳಿಗೆ ಎಂಬಲ್ಲಿ ಬುಧವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.

ಮೃತರನ್ನು ಉಚ್ಚಿಲ ಗುಡ್ಡೆ ನಿವಾಸಿ ಎಂ.ಇಬ್ರಾಹಿಂ (60) ಮತ್ತು ಉಚ್ಚಿಲ ನ್ಯಾಯಪಟ್ನ ನಿವಾಸಿ ಮಹಮ್ಮದ್ ಆಲಿ(40) ಮೃತಪಟ್ಟವರು.
ಘಟನೆ ವಿವರ: ಇಬ್ರಾಹಿಂ ಅವರ ಮೂರನೇ ಮಗಳ ಮದುವೆ ನ.1 ರಂದು ನಿಗದಿಯಾಗಿತ್ತು. ಅದರ ಆಮಂತ್ರಣ ಪತ್ರಿಕೆಯನ್ನು ಹಂಚಲೆಂದು ತಲಪಾಡಿ ಕಡೆಗೆ ದೂರದ ಸಂಬಂಧಿ ಹಾಗೂ ಆಪ್ತ ಸ್ನೇಹಿತ ಮಹಮ್ಮದ್ ಆಲಿ ಅವರ ಜತೆಗೆ ಬೈಕಿನಲ್ಲಿ ತೆರಳುವಾಗ ಘಟನೆ ಸಂಭವಿಸಿದೆ. ಉಚ್ಚಿಲ ಬೋವಿ ಶಾಲೆ ಯ ಒಳರಸ್ತೆಯಿಂದ ರಾ.ಹೆ.66ರನ್ನು ಪ್ರವೇಶಿಸಲು ರಸ್ತೆಬದಿಯಲ್ಲಿ ಬೈಕನ್ನು ನಿಲ್ಲಿಸಿದ್ದ ಸಂದರ್ಭ ಕಾಸರಗೋಡು ಕಡೆಯಿಂದ ಮಂಗಳೂರಿಗೆ ಅತಿವೇಗವಾಗಿ ಬರುತ್ತಿದ್ದ ದೆಹಲಿ ನೋಂದಾಯಿತ ಇನೋವಾ ವಾಹನ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಬೈಕನ್ನು 20 ಮೀ.ವರೆಗೆ ಎಳೆದೊಯ್ದಿತ್ತು. ಗಂಭೀರ ಗಾಯಗೊಂಡ ಈರ್ವರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ಕಾರು ಚಾಲಕ ಜೇಮ್ಸ್ ಜಾಜ್ರ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



