ಸುದ್ದಿ9 ಬಂಟ್ವಾಳ; ಬ್ರಹ್ಮರ ಕೂಟ್ಲುವಿನ ಟೋಲ್ ಫ್ಲಾಝಾದಲ್ಲಿ ಶುಕ್ರವಾರ ಕಾರ್ಯ ಚರಣೆ ನಡೆಸಿದ ಬಂಟ್ವಾಳ ತಹಶೀಲ್ದಾರ್ ಮಲ್ಲೇಸ್ವಾಮಿ ಯವರು, ಸೂಕ್ತ ದಾಖಲೆಪತ್ರ ನೀಡದ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಸಶಸ್ತ್ರ ಭದ್ರತಾ ಸಿಬ್ಬಂದಿಗಳ ಕೋವಿಗಳನ್ನು ಮುಟ್ಟುಗೋಲು ಹಾಕಿದ್ದಾರೆ.ಟೋಲ್ ಫ್ಲಾಝಾದ ಸಿಬ್ಬಂದಿಗಳ ಮೇಲೆ ಇತ್ತೀಚೆಗೆ ನಡೆದಿದ್ದ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಇಬ್ಬರು ಗನ್ ಮ್ಯಾನ್ ಗಳನ್ನು ನೇಮಿಸಿದ್ದರು. ಇದಕ್ಕೆ ಗುತ್ತಿಗೆದಾರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಂದ ಪರವಾನಿಗೆಯನ್ನೂ ಪಡೆದಿದ್ದರು. ಆದರೆ ಶುಕ್ರವಾರ ಬ್ರಹ್ಮರ ಕೂಟ್ಲುವಿನಲ್ಲಿ ಪ್ರತಿಭಟನೆ ನಡೆದಿದ್ದ ಸಂದರ್ಭ ಇಲ್ಲಿನ ಕರ್ತವ್ಯ ನಿರತರಾಗಿದ್ದ ಸಿಬ್ಬಂದಿಗಳನ್ನು ಪರಿಶೀಲಿಸಿದಾಗ ಪೂರಕ ದಾಖಲೆಗಳು ಇಲ್ಲದಿದ್ದ ಹಿನ್ನೆಲೆಯಲ್ಲಿ ಕೋವಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಮಲ್ಲೆಸ್ವಾಮಿ ಪತ್ರಿಕೆಗೆ ತಿಳಿಸಿದ್ದಾರೆ. ಗುತ್ತಿಗೆದಾರರು ತಮ್ಮಲ್ಲಿ ಪರವಾನಿಗೆ ಇದೆ ಎಂದು ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ ಸಂಬಂಧಪಟ್ಟ ದಾಖಲೆ ಹಾಜರುಪಡಿಸಿದರೆ ಕೋವಿ ವಾಪಾಸು ನೀಡಲಾಗುವುದು ಎಂದವರು ತಿಳಿಸಿದ್ದಾರೆ
