ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಬಂಟ್ವಾಳ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಶುಕ್ರವಾರ ಬ್ರಹ್ಮರಕೂಟ್ಲಿನಲ್ಲಿ ಹೆದ್ದಾರಿ ತಡೆ ಹಾಗೂ ಪ್ರತಿಭಟನೆ ನಡೆಯಿತು. ಟೋಲ್ ಗೇಟ್ ಕೇಂದ್ರದ ಅವ್ಯವಸ್ಥೆ, ಸಿಬ್ಬಂದಿಗಳ ಅನಾಗರಿಕ ವರ್ತನೆ, ಅನಿಯಮಿತ ಶುಲ್ಕ ವಸೂಲಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಟೋಲ್ ಕೇಂದ್ರವನ್ನು ಇಲ್ಲಿಂದ ತೆರವುಗೊಳಿಸಿ ಬೇರೆಡೆಗೆ ಸ್ಥಳಾಯಿಸುವಂತೆ ಒತ್ತಾಯಿಸಿದರು. ರಸ್ತೆಯಲ್ಲಿ ಕುಳಿತು ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಟೋಲ್ ಸಂಗ್ರಹ ಕೇಂದ್ರದೆಡೆಗೆ ನುಗ್ಗಿ ಟೋಲ್ ಸಂಗ್ರಹವನ್ನು ತಡೆದರು. ಸರಕಾರಕ್ಕೆ ವಂಚನೆ,ಬಂದೂಕು ತೋರಿಸಿ ಶುಲ್ಕ ವಸೂಲಿ: ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯತು ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ ಚತುಷ್ಪಥ ರಸ್ತೆ ಪೂರ್ಣಗೊಳಿಸದೇ ಇಲ್ಲಿ ಟೋಲ್ ಸಂಗ್ರಹ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯವನ್ನೂ ಕಲ್ಪಿಸಿಲ್ಲ. ಟೋಲ್ ಗೇಟ್ ಪೂರಕವಾದ ಸ್ಥಳಾವಕಾಶವೂ ಇಲ್ಲಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಇದು ಅನಧೀಕೃತ ಟೋಲ್ ಸಂಗ್ರಹ ಕೇಂದ್ರವಾಗಿದ್ದು ಇದನ್ನು ತಕ್ಷಣ ಇಲ್ಲಿಂದ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.ಇಲ್ಲಿ ಕಾನೂನಿನಂತೆ ಟೆಂಡರ್ ನಿಯಾಮಾವಳಿ ಪ್ರಕಾರ ಕಂಪ್ಯೂಟರೀಕೃತ ಗೇಟ್ ಅಳವಡಿಕೆ ಇಲ್ಲದಿರುವುದರಿಂದ ಸರಿಯಾದ ಲೆಕ್ಕ ತೋರಿಸದೇ ಸರಕಾರಕ್ಕೆ ವಂಚಿಸಲಾಗುತ್ತಿದೆ. ಪ್ರಯಾಣಿಕರಿಂದಲೂ ನಿಗದಿತ ದರಕ್ಕಿಂತ ಹೆಚ್ಚುವರಿ ಸುಂಕ ವಸೂಲಿ ಮಾಡಿ ಅನ್ಯಾಯವೆಸಗಲಾಗುತ್ತಿದೆ. ಇಲ್ಲಿನ ಸಿಬ್ಬಂದಿಗಳು ರಾಜಕೀಯ ಪಕ್ಷಗಳೊಂದಿಗೆ ಸಾಮೀಲಾಗಿ ಪ್ರಯಾಣಿಕರೊಡನೆ ಗೂಂಡಾಗಿರಿ ಪ್ರವೃತ್ತಿಯನ್ನು ನಡೆಸುತ್ತಿದ್ದಾರೆ. ಬಂದೂಕು ತೋರಿಸಿ ಸುಂಕ ವಸೂಲಿ ಮಾಡುವ ಕೃತ್ಯವೂ ನಡೆಯುತ್ತಿದೆ ಎಂದು ಆರೋಪಿಸಿದ ಚಂದ್ರಪ್ರಕಾಶ್ ಶೆಟ್ಟಿ ಸೂಕ್ತ ಸ್ಥಳಾವಕಾಶ ಇರುವೆಡೆಗೆ ಇದನ್ನು ತಕ್ಷಣ ಸ್ಥಳಾಂತರಿಸದಿದ್ದಲ್ಲಿ ಸಾರ್ವಜನಿಕರೇ ತಕ್ಕ ವ್ಯವಸ್ಥೆ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ಸಮಿತಿಯ ಪ್ರಮುಖ ಹರೀಕೃಷ್ಣ ಬಂಟ್ವಾಳ್, ಜಿಲ್ಲಾ ಪಂಚಾಯತು ಸದಸ್ಯರಾದ ಎಂ.ಎಸ್.ಮಹಮ್ಮದ್, ಮಮತ ಗಟ್ಟಿ, ಭೂ ಬ್ಯಾಂಕ್ ಅದ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ಅನಧೀಕೃತವಾಗಿ ಕಾರ್ಯಾಚರಿಸುತ್ತಿರುವ ಈ ಟೋಲ್ ಸಂಗ್ರಹ ಕೇಂದ್ರವನ್ನು ತಕ್ಷಣ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರಲ್ಲದೆ ತಪ್ಪಿದ್ದಲ್ಲಿ ಭಾರೀ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಪ್ರಮುಖರಾದ ಬಿ.ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಪ್ರಕಾಶ್ ಶೆಟ್ಟಿ ತುಂಬೆ, ಪಿಯೂಸ್ ಎಲ್.ರೊಡ್ರಿಗಸ್, ಪದ್ಮನಾಭ ರೈ, ಪರಮೇಶ್ವರ, ಬಿ.ಕೆ.ಇದಿನಬ್ಬ, ಮಧುಸೂಧನ್ ಶೆಣೈ ಮೊದಲಾದವರಿದ್ದರು.
ಸುಂಕ ವಸೂಲಿಗೆ ತಡೆ:
ಒಂದೆಡೆ ಪ್ರತಿಭಟನಾ ಸಭೆ ನಡೆಯುತ್ತಿದ್ದಂತೆ ಮತ್ತೊಂದೆಡೆ ಯುವಕರ ಗುಂಪೊಂದು ಟೋಲ್ಸಂಗ್ರಹ ಕೇಂದ್ರದೆಡೆಗೆ ತೆರಳಿ ಸುಂಕ ನೀಡದಂತೆ ವಾಹನಗಳ ಚಾಲಕರಿಗೆ ಸೂಚಿಸಿತು. ವಾಹನಗಳು ಸುಂಕ ಪಾವತಿಸದಯೇ ಪ್ರಯಾಣಿಸತೊಡಗಿತು. ಈ ಸಂದರ್ಭ ಕೆಲಕ್ಷಣ ಆತಂಕದ ವಾತಾವರಣ ನಿಮರ್ಾಣಗೊಂಡರೂ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ಪೋಲೀಸರ ಸಕಾಲಿಕ ಮದ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.
ರಸ್ತೆ ತಡೆ:
ಸಭೆಯ ಬಳಿಕ ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ಕುಳಿತು ರಸ್ತೆ ತಡೆ ನಡೆಸಿದರು. ಈ ಸಂದರ್ಭ ಅಪರ ಜಿಲ್ಳಾಧಿಕಾರಿ ಹಾಗೂ ಬಂಟ್ವಾಳ ತಾಲೂಕು ತಹಶೀಲ್ದಾರ ಮಲ್ಲೇಸ್ವಾಮಿ ಬೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ರಸ್ತೆ ತಡೆ ಹಿನ್ನೆಲೆಯಲ್ಲಿ ಕೆಲಹೊತ್ತು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭಾರೀ ಪೋಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
- tolget




