ಮೂಡುಬಿದಿರೆ: ರಾ.ಹೆ 169ನ ಮಿಜಾರಿನಲ್ಲಿ ಬುಧವಾರ ಸಂಜೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಯುವ ಛಾಯಾಗ್ರಾಹಕ, ಮದುವೆ ನಿಗಧಿಯಾಗಿದ್ದ ಯುವಕ ದುರ್ಮರಣಕ್ಕೀಡಾಗಿದ್ದಾರೆ.


ಅ.25ರಂದು ಶ್ರೀ ಮಹಾವೀರ ಭವನದಲ್ಲಿ ಮದುವೆ ನಿಗಧಿಯಾಗಿದ್ದ ಹರೀಶ್ ಆಚಾರ್ಯ(29) ಅಪಘಾತದಲ್ಲಿ ಸಾವನ್ನಪ್ಪಿದವರು. ಶಿರ್ತಾಡಿ ಮಹಾಲಿಂಗೇಶ್ವರ ದೇವಸ್ಥಾನ ಬಳಿ ನಿವಾಸಿ ಶ್ರೀಧರ ಆಚಾರ್ಯ ಅವರ ತೃತೀಯ ಪುತ್ರರಾಗಿದ್ದಾರೆ. ಹರೀಶ್ ಮೂಡುಬಿದರೆ ಛಾಯಾಚಿತ್ರಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ಮದುವೆ ಸಮಾರಂಭದ ವೀಡಿಯೋ ಚಿತ್ರೀಕರಣ ಮುಗಿಸಿ ಕೈಕಂಬ ಕಡೆಯಿಂದ ಮೂಡಬಿದ್ರೆಗೆ ತೆರಳುತ್ತಿದ್ದಾಗ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಬಳಿ ಬರುತ್ತಿದ್ದಾಗ ಬಸ್ ಡಿಕ್ಕಿಯಾಗಿದೆ. ಈ ಕಾರು ಸಂಪೂರ್ಣವಾಗಿ ಹಿಂದಕ್ಕೆ ತಿರುಗಿದ್ದು, ಹಿಂಬದಿಯಲ್ಲಿ ಬರುತ್ತಿದ್ದ ಟೆನ್ವೀಲರ್ ಕಾರಿನ ಎದುರು ಭಾಗಕ್ಕೆ ಡಿಕ್ಕಿಯಾಗಿದೆ.
ಗಂಭೀರವಾಗಿ ಗಾಯಗೊಂಡ ಹರೀಶ್ ಅವರನ್ನು ಆಸ್ಪತ್ರಗೆ ಸಾಗಿಸಲಾಯಿತಾದರೂ, ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
