ಮೂಡುಬಿದರೆ: ಬಿಲ್ಲವ ಸಂಘದಲ್ಲಿ ಸಕ್ರಿಯನಾಗಿದ್ದ ಪ್ರಶಾಂತ್ನನ್ನು ಬರ್ಬರವಾಗಿ ಕೊಲೆ ಮಾಡಿರುವುದು ಖಂಡನೀಯ. ಪ್ರಶಾಂತ್ ಹತ್ಯೆ ನಡೆದು ನಾಲು ದಿನಗಳಾದರೂಆರೋಪಿಗಳ ಬಂಧನವಿಲ್ಲ. ನಾಯಿ ಸಾವಿಗೂ ಕಾನೂನಿನ ತಡೆಯಿದೆ. ಆದರೆ ಅಮಾಯಕರ ಸಾವಿಗೆ ಕಾನೂನಿನ ಕ್ರಮವಿಲ್ಲವೇಕೆ? ಎಂದು ಮೂಡುಬಿದರೆ ಬಿಲ್ಲವ ಸಂಘ ಪ್ರಶ್ನಿಸಿದೆ.
ಮೂಡುಬಿದರೆ ಬಿಲ್ಲವ ಸಂಘದ ಸೇವಾದಳದಲ್ಲಿ ಸಕ್ರಿಯರಾಗಿದ್ದ ಪ್ರಶಾಂತ್ ಹತ್ಯೆಯನ್ನು ಖಂಡಿಸಿ ಮೂಡುಬಿದರೆ ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಪದಾಧಿಕಾರಿಗಳು ಸೋಮವಾರ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಪೂವಪ್ಪ ಕುಂದರ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಇದೊಂದು ಹೇಯ ಕೃತ್ಯ. ಕಾನೂನು ರೀತಿಯಲ್ಲಿ ತಪಿತಸ್ಥರಿಗೆ ಶಿಕ್ಷೆಯಾಗಬೇಕು. ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆಗೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಇಂತಹ ಘಟನೆ ಎಲ್ಲೂ ಮರುಕಳಿಸದಂತೆ ಕಾನೂನು ಸುವ್ಯವಸ್ಥೆಯನ್ನು ಬಲಗೊಳಿಸಬೇಕು. ಶ್ರಮಜೀವಿಯಾಗಿದ್ದ ಪ್ರಶಾಂತ್ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ ಅವರು, ಆತನ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಕುರಿತು ಚಿಂತನೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಸಂಘದ ಪದಾಧಿಕಾರಿಗಳಾದ ಸುರೇಶ್ ಕೋಟ್ಯಾನ್, ವಾಸು ಪೂಜಾರಿ, ರವೀಂದ್ರ ಸುವರ್ಣ, ಲಕ್ಷ್ಮಣ್ ಪೂಜಾರಿ, ಪದ್ಮನಾಭ ಪೇರಿ, ತುಕರಾಮ್, ನವೀನ್ ಕರ್ಕೇರಾ ಉಪಸ್ಥಿತರಿದ್ದರು.
