ವಿಟ್ಲ: ನಿರ್ಜನ ಪ್ರದೇಶಕ್ಕೆ ಹೋಗುತ್ತಿದ್ದ ಯುವಕ ಯುವತಿಯ ಜೋಡಿಯೊಂದನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ನೀಡಿದ ಘಟನೆ ಬಿಲ್ಲಂಪದವಿನಲ್ಲಿ ಭಾನುವಾರ ನಡೆದಿದೆ.


ತುಮಕೂರು ಮೂಲದ ಯುವಕ ರಾಜೇಶ್ ಹಾಗೂ ಕಾಸರಗೋಡು ಅಮೈ ಮೂಲದ 22ವರ್ಷದ ಅವಿವಾಹಿತ ಯುವತಿ ವಿಟ್ಲದಿಂದ ರಿಕ್ಷಾ ಮೂಲಕ ಬಿಲ್ಲಂಪದವಿಗೆ ಬಂದಿದ್ದಾರೆ. ಬಳಿಕ ಗುಡ್ಡಕ್ಕೆ ಅನುಮಾನಾಸ್ಪದವಾಗಿ ಹೋಗುತ್ತಿರುವುದನ್ನು ಕೆಲಸಮಾಡುತ್ತಿದ್ದವರು ಗಮನಿಸಿ ಊರಿನವರಿಗೆ ಹಾಗೂ ವಿಟ್ಲ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ವಿಚಾರಿಸಿದಾಗ ಯುವತಿಯ ಕೈಯಿಂದ 5 ಸಾವಿರ ಹಣ ಪಡೆದಿದ್ದು, 2 ಸಾವಿರ ಹಿಂತಿರುಗಿಸಲು ಗುಡ್ಡಕ್ಕೆ ಕರೆದುಕೊಂಡು ಬಂದಿದ್ದಾಗಿ ಯುವಕ ಹೇಳಿದ್ದಾನೆ.
ಯುವಕ ಸುಮಾರು 11 ವರ್ಷದಿಂದ ವಿಟ್ಲ ಆಸುಪಾಸಿನಲ್ಲಿ ಕೆಲಸ ಮಾಡುತ್ತಿದ್ದು, ಸುಮಾರು 9ತಿಂಗಳಿಂದ ಈಕೆಯ ಜತೆಗೆ ಮೊಬೈಲ್ ಸಂಪರ್ಕವಿದ್ದ ಎನ್ನಲಾಗಿದೆ. ಯುವತಿಯನ್ನು ಮೊದಲ ಬಾರಿಗೆ ಈರೀತಿ ಕರೆದುಕೊಂಡು ಬರುತ್ತಿದ್ದು, ಆಕೆಯನ್ನು ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ತಿಳಿಸಿದ್ದಾನೆ.ಸ್ಥಳಕ್ಕೆ ವಿಟ್ಲ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ಅವರು ಸಿಬ್ಬಂದಿಗಳ ಜತೆಗೆ ಬೇಟಿ ನೀಡಿ ಜೋಡಿಯನ್ನು ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಬರೆಸಿಕೊಂಡು ಯುವತಿಯನ್ನು ಪೋಷಕರೊಂದಿಗೆಕಳುಹಿಸಿದ್ದಾರೆ.



