ಬಜ್ಪೆ: ಬಜ್ಪೆ ಠಾಣಾ ವ್ಯಾಪ್ತಿಯ ಎಕ್ಕಾರ್ ಹುಣ್ಸೆಕಟ್ಟೆ ಎಂಬಲ್ಲಿ ಭೀಕರ ಅಪಘಾತ ನಡೆದು ಇಬ್ಬರ ದುರ್ಮರಣಕ್ಕೆ ಕಾರಣನಾದ ಆರೋಪಿ ಟೆಂಪೋ ಚಾಲಕನನ್ನು ಬಜ್ಪೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಯನ್ನು ಬಜ್ಪೆ ನಿವಾಸಿ ಅಬ್ದುಲ್ ಬಾತಿಶ್(34) ಎಂದು ಗುರುತಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಆತನ 407 ಮೀನಿನ ಟೆಂಪೋವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಎಕ್ಕಾರ್ ಹುಣ್ಸೆಕಟ್ಟೆ ಎಂಬಲ್ಲಿ ಸೆ.21ರಂದು ಬೆಳಿಗ್ಗೆ 7.50ರ ವೇಳೆಗೆ ಬದಾಮಿ ನಿವಾಸಿ ಶಿವಮೂರ್ತಿ (27) ಹಾಗೂ ಕುಶಾಲನಗರ ನಿವಾಸಿ ಸಂತೋಷ್(25) ಎಂಬವರು ಬಜಾಜ್ ಪ್ಲಾಟಿನಾ ಬೈಕ್ನಲ್ಲಿ ಬಜ್ಪೆ ಕಡೆಯಿಂದ ಕಟೀಲು ಕಡೆಗೆ ಸಂಚರಿಸುತ್ತಿದ್ದರು. ಈ ವೇಳೆ ಕಟೀಲಿನಿಂದ ಬಜ್ಪೆ ಕಡೆಗೆ ವೇಗವಾಗಿ ಹಾಗೂ ಅತಿ ನಿರ್ಲಕ್ಷ್ಯದಿಂದ ತನ್ನ ಟೆಂಪೋದಲ್ಲಿ ಸಾಗುತ್ತಿದ್ದ ಆರೋಪಿ ಅಬ್ದುಲ್ ಬಾತಿಶ್ ತನ್ನ ಮೀನಿನ ಟೆಂಪೋವನ್ನು ಬೈಕ್ಗೆ ಗುದ್ದಿದ್ದಾನೆ. ಈ ವೇಳೆ ಬೈಕ್ ಸವಾರರಿಬ್ಬರು ಬೈಕ್ನಿಂದ ಬಿದ್ದು ರಕ್ತಸಿಕ್ತವಾಗಿ ವಿಲ ವಿಲ ಒದ್ದಾಟ ನಡೆಸುವುದನ್ನು ಮನಗಂಡು ಅಲ್ಲಿಂದ ಬಜ್ಪೆ ಕಡೆಗೆ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಆದರೆ ದುದರದೃಷ್ಟವಶಾತ್ ಬೈಕ್ ಸವಾರರಿಬ್ಬರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಅಪಘಾತಕ್ಕೆ ಕಾರಣನಾದ ಟೆಂಪೋದ ತಲಾಶೆಯಲ್ಲಿ ತೊಡಗಿದ್ದ ಪೊಲೀಸರಿಗೆ ಟೆಂಪೋ ಬಜ್ಪೆ ಕಡೆಗೆ ಸಾಗಿದ್ದ ವರ್ತಮಾನ ಸಿಕ್ಕಿತ್ತು.
ಅಲ್ಲದೆ ಆರೋಪಿ ಬಾತಿಶ್ ತನ್ನ ಟೆಂಪೋವನ್ನು ಬಜ್ಪೆಯ ಪೆಟ್ರೋಲ್ ಪಂಪ್ ಬಳಿ ಅನುಮಾನಸ್ಪದವಾಗಿ ಪರಿಶೀಲಿಸುವುದನ್ನು ಹಾಗೂ ಅದರಲ್ಲಿ ರಕ್ತದ ಕಲೆಯನ್ನು ಗಮನಿಸಿ ಸ್ಥಳೀಯರೊಬ್ಬರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಮೊನ್ನೆಯೇ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತನ್ನ ಕೃತ್ಯವನ್ನು ಆತ ಒಪ್ಪಿಕೊಂಡಿದ್ದಾನೆ. ಅದರಂತೆ ಆರೋಪಿಯ ವಿಚಾರಣೆ ನಡೆಸಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಬಂಧನ ವಿಧಿಸಲಾಗಿದೆ
