ಮೂಡುಬಿದಿರೆ: ಮೂಡುಕೊಣಾಜೆ ಗ್ರಾಮದ ಮುಗೇರ್ಕಳ ಎಂಬಲ್ಲಿ ವೃದ್ಧರೊಬ್ಬರ ಶವ ಬಾವಿಯಲ್ಲಿ ಮಂಗಳವಾರ ಪತ್ತೆಯಾಗಿದ್ದು, ಕೊಲೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಮೂಡುಬಿದರೆ ಮುಗೇರ್ಕಳ ನಿವಾಸಿ ಗುರುವ(60) ಮೃತನಾದ ವ್ಯಕ್ತಿ. ಗುರುವ ಅವರ ಸ್ವಂತ ಜಾಗದಲ್ಲೇ ಶವ ಪತ್ತೆಯಾಗಿದ್ದು, ಪ್ರಕರಣ ಸಂಬಂಧಪಟ್ಟಂತೆ ಸಂಬಂಧಿಕರಿಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುದ್ದಾರೆ.
ಮೃತ ಗುರುವ ಅವರ ಪತ್ನಿ ಗಿರಿಜಾ ಅವರು ಎರಡು ವಾರಗಳ ಹಿಂದೆ ಗಂಡನ ಜೊತೆ ಜಗಳವಾಡಿ ಬೆಳುವಾಯಿ ಗ್ರಾಮದ ಕೆಸರುಗದ್ದೆಯಲ್ಲಿ ವಾಸವಾಗತೊಡಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಗುರುವ ಅವರ ಮನೆಯಲ್ಲೇ ಇದ್ದ ಗಿರಿಜಾ ಅವರ ತಮ್ಮ ಸದಾನಂದ ಹಾಗೂ ಸಂಬಂಧಿಕ ಬಾಬುವವರು ನಿತ್ಯ ಜಗಳವಾಡುತ್ತಿದ್ದರು. ಸೋಮವಾರ ರಾತ್ರಿ 8.15ರ ವೇಳೆಗೆ ಎಂದಿನಂತೆ ಕುಡುದು ಜಗಳವಾಗಿದ್ದು, 8.30 ವೇಳೆಗೆ ಸದಾನಂದ ಹಾಗೂ ಬಾಬು ಅವರು ಸ್ಥಳೀಯ ಮುದರ ಪೂಜಾರಿ ಎಂಬವರ ಮನೆಗೆ ಬಂದು ಮಲಗುತ್ತೇವೆ ಎಂದು ಹೇಳಿದ್ದರು ಆ ಸಂದರ್ಭದಲ್ಲಿ ಅವರ ಕೈಯಲ್ಲಿ ದೊಣ್ಣೆ, ಟಾರ್ಜ್ ಹಾಗೂ ಬೆಡ್ಶೀಟ್ ಇತ್ತೆನ್ನಲಾಗಿದೆ. ಅನುಮಾನಗೊಂಡ ಮನೆಯವರು ಸ್ಥಳೀಯ ಯುವಕರಿಗೆ ಮಾಹಿತಿ ನೀಡಿದ್ದರು. ರಾತ್ರಿ 9 ಗಂಟೆ ನಂತರ ಗುರುವ ಅವರು ನಾಪತ್ತೆಯಾಗಿದ್ದು, ಸ್ಥಳೀಯರು ಸದಾನಂದ ಅವರನ್ನು ವಿಚಾರಿಸಿದಾಗ, ಹಾರಿಕೆ ಉತ್ತರ ಸಿಕ್ಕಿದ್ದು, ಕೂಡಲೇ ಸ್ಥಳೀಯರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನಡುರಾತ್ರಿ 2ಗಂಟೆವರೆಗೂ ಪತ್ತೆ ಹಚ್ಚಿದರೂ ಗುರುವ ಪತ್ತೆಯಾಗಿರಲಿಲ್ಲ.
ಮಂಗಳವಾರ ಮುಂಜಾನೆ ಸ್ಥಳೀಯರು ಬಾವಿ ಬಳಿ ಬಂದಾಗ ಶವವಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಮೂಡುಬಿದಿರೆ ಪೊಲೀಸರು ಶಂಕಿತ ಆರೋಪಿಗಳಾದ ಬಾಬು ಹಾಗೂ ಸದಾನಂದ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.



