ಮೂಡಬಿದರೆ: ಕಳೆದ 34 ವರುಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ವರ್ಧಮಾನ ಪ್ರಶಸ್ತಿ ಪೀಠವು 2014ರ ಸಾಲಿನಲ್ಲಿ ವರುಷದ ಶ್ರೇಷ್ಠ ಕನ್ನಡ ಸಾಹಿತ್ಯ ಕೃತಿಗೆ ನೀಡುವ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ಧಾರವಾಡದ ಡಾ.ಗಿರಡ್ಡಿ ಗೋವಿಂದರಾಜ ಅವರ ‘ಸಾಹಿತ್ಯಲೋಕದ ಸುತ್ತಮುತ್ತ (ಪ್ರಸಂಗಗಳು) ಮತ್ತು ವರುಷದ ಶ್ರೇಷ್ಠ ವರ್ಧಮಾನ ಉದಯೋನ್ಮುಖ ಸಾಹಿತ್ಯ ಕೃತಿಗೆ ನೀಡುವ ಪ್ರಶಸ್ತಿಯನ್ನು ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಉಡುಪಿ ಅವರ ‘ತೊಗಲುಗೊಂಬೆ’ ಕಾದಂಬರಿಗೆ ನೀಡಲು ನಿರ್ಧರಿಸಿದೆ.

ಪೀಠದ ಅಧ್ಯಕ್ಷ ಸಿ.ಕೆ ಪಡಿವಾಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2014ರ ಸಾಲಿನ ತೀರ್ಪುಗಾರ ಮಂಡಲಿಯ ಸದಸ್ಯರಾದ ಡಾ.ಕಮಲಾ ಹೆಮ್ಮಿಗೆ, ಡಾ. ಬಿ.ಜನಾರ್ದನ ಭಟ್, ಪ್ರೊ.ಧರಣೇಂದ್ರ ಕುರುಕುರಿ ನೀಡಿದ ಅಂಕಗಳ ಆಧಾರದಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ದಸರಾ ಸಾಹಿತ್ಯೋತ್ಸವದಲ್ಲಿ ನಡೆಯಲಿದೆ ಎಂದು ಪೀಠದ ಪ್ರಧಾನ ನಿರ್ದೇಶಕರಾದ ಡಾ.ನಾ.ಮೊಗಸಾಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
