ಮುಂಬಯಿ, ಜು.19: ಬೃಹನ್ಮುಂಬಯಿಯಲ್ಲಿ ಕಾರ್ಯಚರಿಸುತ್ತಿರುವ ಒಕ್ಕಲಿಗ ಸಂಘ ಮಹಾರಾಷ್ಟ್ರ ಸಂಚಾಲಕತ್ವ ದ ಜಯಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಇದರ 15ನೇ ವಾರ್ಷಿಕ ಮಹಾಸಭೆ ಇಂದಿಲ್ಲಿ ಭಾನುವಾರ ಅಂಧೇರಿ ಪೂರ್ವದ ಜೆ.ಬಿ.ನಗರದಲ್ಲಿನ ಪಂಚಾಯತಿ ಸೇವಾ ಟ್ರಸ್ಟ್ನ ಸತ್ಯನಾರಾಯಣ ಗೋಯೆಂಕ ಭವನದ ಸಭಾಗೃಹದಲ್ಲಿ ಸೊಸೈಟಿ ಕಾರ್ಯಾಧ್ಯಕ್ಷ ನಾರಾಯಣ ಆರ್.ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಲ್ಲಿಕಾರ್ಜುನ ಸ್ವಾಮೀಜಿ ಕಾಂಜೂರ್ಮಾಗರ್ ಅವರು ಒಕ್ಕಲಿಗ ಸಮುದಾಯದ ಧೀಶಕ್ತಿ ದೈವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಹಾಗುರು ಮತ್ತು ಧನಲಕ್ಷ್ಮೀ ಮಾತೆಯ ಪ್ರತಿಮೆಗೆ ಪೂಜೆ ನೆರವೇರಿಸಿ ಮಂಗಳಾರತಿಗೈದು ಮಹಾಸಭೆಗೆ ವಿಧಿವತ್ತಾಗಿ ಚಾಲನೆಯನ್ನಿತ್ತರು. ಬಳಿಕ ಸೊಸೈಟಿಯ ಮಹಿಳಾ ನಿರ್ದೇಶಕಿ ಯರು ಮಾತೆ ಜಯಲಕ್ಷ್ಮೀ ದೇವಿಗೆ ಆರತಿ ನೆರವೇರಿಸುವುದರೊಂದಿಗೆ ಮಹಾಸಭೆ ಆರಂಭಗೊಂಡಿತು.
ಕರ್ನಾಟಕ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಶಾಸಕ, ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ ರೂಪಿತ ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಸಂಸ್ಥಾಪಕಾಧ್ಯಕ್ಷ, ಜಯಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಕಾರ್ಯಧ್ಯಕ್ಷ ನಾರಾಯಣ ಆರ್.ಗೌಡ ದೀಪ ಬೆಳಗಿಸಿ ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರು. ಅತಿಥಿಗಳಾಗಿ ಕಾಂಗ್ರೇಸ್ ನೇತಾರ ಚಂದ್ರ ಶೆಟ್ಟಿ, ಸಮಾಜಸೇವಕ ಜಿತೇಂದ್ರ ದೇವ್ಕರ್ ಹಾಗೂ ಸೊಸೈಟಿಯ ಉಪಾಧ್ಯಕ್ಷ ಕೆ.ರಾಜೇ ಗೌಡ, ಕಾರ್ಯದರ್ಶಿ ರಂಗಪ್ಪ ಸಿ.ಗೌಡ, ನಿರ್ದೇಶಕರುಗಳಾದ ಚಂದನ್ ಸಿ.ಚಾರಿ, ಮುತ್ತೇ ಎಸ್.ಗೌಡ, ಎ.ಕೆಂಪೇಗೌಡ (ರಾಮಣ್ಣ) ಗೊಂಡೇನಹಳ್ಳಿ, ದೇವಕಿ ಎನ್.ಗೌಡ, ಅನುಸೂಯ ಆರ್.ಗೌಡ, ಸುನಂದ ಆರ್.ಗೌಡ ಮತ್ತು ಆರ್.ಯು ಲಗಡೆ ವೇದಿಕೆಯಲ್ಲಿ ಆಸಿನರಾಗಿದ್ದರು.
ಸೊಸೈಟಿಯ ಗ್ರಾಹಕರು, ಹಿಶೆದಾರರು, ಹಿತೈಷಿಗಳು ಸೇರಿದಂತೆ ಒಕ್ಕಲಿಗ ಸಮೂದಾಯದ ಗಣ್ಯರು, ಬಾಂಧವರು ಸಭೆಯಲ್ಲಿ ಹಾಜರಿದ್ದು ಕಾರ್ಯಧ್ಯಕ್ಷ ನಾರಾಯಣ ಗೌಡರು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಮಾತನಾಡಿ “ಒಂದೆಡೆ ಸಂಪೂರ್ಣ ಸಾಕ್ಷರತೆಯಿಂದ ಸಮುದಾಯಗಳ ಉದ್ಧಾರ ಸಾಧ್ಯವಾದರೆ ಮತ್ತೊಂದೆಡೆ ಆರ್ಥಿಕ ಬಲವರ್ಧನೆಯಿಂದ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯವಾಗುವುದು. ಇವೆರಡರ ಸಾಧನಾಸಿದ್ಧಿಯಿಂದಲೇ ಬಲಾಢ್ಯ ಸಮಾಜ ರೂಪುಗೊಳ್ಳುವುದು. ಕರ್ಮಭೂಮಿ ವಾಣಿಜ್ಯನಗರಿಯಲ್ಲಿ ಉದರ ಬರೇ ಪೋಷಣೆಯನ್ನೇ ಸವಾಲಾಗಿಸದ ಜನತೆ ಪರಿಪೂರ್ಣ ಪರಿವಾರದ ಜವಾಬ್ದಾರಿಯನ್ನು ಹೊತ್ತು ಬದುಕು ನಡೆಸುತ್ತಿದ್ದಾರೆ. ಇವೆಲ್ಲವನ್ನೂ ನಿಭಾಯಿಸಲು ಆರ್ಥಿಕ ಅಸಾಮಾರ್ಥ್ಯರು ನಮ್ಮಂತಹ ಪಥ ಸಂಸ್ಥೆಯಲ್ಲಿ ವಿಶ್ವಾಸವಿಸಿರಿ ಉದ್ಯಮಶೀಲರಾಗುವ ಕನಸನ್ನೊತ್ತು ಬಂದಾಗ ಅವರ ಪರ ನಾವು ಸ್ಪಂದಿಸಿದಾಗಲೇ ಸಂಸ್ಥೆಯೂ ಬೆಳೆದು ಅವರೂ ಬಾಳನ್ನು ಬೆಳಗಿಸುತ್ತಾರೆ” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಕಾರ್ಯದರ್ಶಿ ರಂಗಪ್ಪ ಸಿ.ಗೌಡ ಮಾತನಾಡಿ ಸೊಸೈಟಿಯ ಪಾಲುದಾರಿಕ ಬಂಡವಾಳ 1.76ಕೋಟಿ, ಕಾಯ್ದಿರಿಸಿದ ಸ್ಥಿರನಿಧಿ 1.98 ಕೋಟಿ, ಠೇವಣಾತಿ 18.68,ಮುಂಗಡ ಮೊತ್ತ 15.37ಕೋಟಿ, ಬಂಡವಾಳ ವಿನಿಯೋಗ 5.35 ಕೋಟಿ, ಸ್ಥಿರನಿಧಿ 1.50ಕೋಟಿ, ವಾರ್ಷಿಕ ಲಾಭಾಂಶವು 2.41 ಕೋಟಿ ಪಡೆದು ಕಾರ್ಯಮಾನ ಬಂಡವಾಳ ರೂಪಾಯಿ 22.84 ಕೋಟಿ ವ್ಯವಹಾರಿಸಲಾಗಿದೆ ಎಂದು ಸೊಸೈಟಿಯ ಗತ ವರ್ಷದ ನಿವ್ವಳ ಲಾಭ ಮತ್ತು ಲೆಕ್ಕಾಚಾರ ವರದಿ ಭಿತ್ತರಿಸಿ ಸೊಸೈಟಿಯನ್ನು ಆರ್ಥಿಕವಾಗಿ ಬಲ ಪಡಿಸಲಾಗಿದೆ ಎಂದರು. ನಮ್ಮೆಲ್ಲಾ ಸಾಧನೆಗೆ ನಿರ್ದೇಶಕರು ಮತ್ತು ನೌಕರವೃಂದ ಶಕ್ತಿ ತುಂಬಿ ಶ್ರಮಿಸುತ್ತಾ ಅನೇಕರ ಹಣಕಾಸು ಸೇವೆಗೆ ಸ್ಪಂದಿಸಿದ ಸಮಾಧಾನ ನಮ್ಮದಾಗಿದೆ ಎಂದರು.
ಉಪಾಧ್ಯಕ್ಷ ಕೆ.ರಾಜೇ ಗೌಡ ಮಾತನಾಡಿ ಇದು ಒಕ್ಕಲಿಗ ಸಮುದಾಯದ ಸಾರಥ್ಯದಲ್ಲಿ ಮುನ್ನಡೆಯುವ ಪಥ ಸಂಸ್ಥೆಯಾದರೂ ಅಖಂಡ ಸಮಾಜಕ್ಕೆ ಪ್ರಯೋಜನಕಾರಿಯಾಗಿ ಬೆಳೆದು ನಿಂತಿದೆ. ಆರ್ಥಿಕ ನೆರವುವೊಂದೇ ನಮ್ಮ ಉದ್ದೇಶವಾಗಿರಿಸದೆ ಜನಸಾಮಾನ್ಯರ ಸೇವೆಗೆ ಮುಡುಪಾಗಿಸಿ ಸೊಸೈಟಿ ಮೂಲಕ ನಗರದಲ್ಲಿನ ನೂರಾರು ಜನತೆಗೆ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿ ಅವರಿಗೆ ಭವಿಷ್ಯ ರೂಪಿಸುವಲ್ಲಿ ಸಮರ್ಥವಾಗಿ ಯಶ ಕಂಡಿದೆ. ಗ್ರಾಹಕರ ಹಾಗೂ ಷೇರುದಾರರ ಸಹಯೋಗ ಸದಾ ನಮಗೆ ಪ್ರೋತ್ಸಾಕರ ಎಂದರು.
ಸಭಿಕರ ಪರವಾಗಿ ಶೇಖರ್ ಜೆ.ಗೌಡ, ಚಂದ್ರ ಶೆಟ್ಟಿ, ಜಿತೇಂದ್ರ ದೇವ್ಕರ್ ಉದಯ್ ಪ್ರತಾಪ್ ಸಿಂಗ್ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಸಲಹೆ-ಸೂಚನೆಗಳನ್ನೀಡಿ ಸೊಸೈಟಿಯ ಉನ್ನತಿಗಾಗಿ ಶುಭಾರೈಸಿದರು.
ನೌಕರವೃಂದದ ಪ್ರಕಾಶ್ ನಾಮ್ದೇವ್ ವಾಡ್ಕರ್, ಪ್ರದೀಪ್ ಕುಮಾರ್ ರಾಮೇ ಗೌಡ, ಶಿವಕುಮಾರ್ ಹಿರಣ್ಯ ಗೌಡ, ಕು| ಮಮತಾ ದೊರೆ ಗೌಡ, ಆಶಾರಾಣಿ ಬಾಬು ಗೌಡ, ಗಣೇಶ್ ಚಿಕ್ಕೇ ಗೌಡ, ದೈನಂದಿನ ಹಣಸಂಗ್ರಹಾ ಪ್ರತಿನಿಧಿಗಳಾದ ಮಿನಲ್ ಪಿ.ದೌಂಡ್, ಮಂಜೇ ಡಿ.ಗೌಡ, ರವಿಕುಮಾರ್ ಎನ್.ಗೌಡ, ರಾಮಕೃಷ್ಣ ಎನ್.ಗೌಡ, ಬಸುರಾಜ್ ಸಿ.ಗೌಡ, ಪ್ರವೀಣ್ ಜಿ.ಧಣವಡೆ, ಸತ್ಯನಾರಾಯಣ ಎಲ್.ತಿವಾರಿ, ದೇವರಾಜ್ ಡಿ.ಗೌಡ, ಶಂಕರ್ ಆರ್.ಗೌಡ, ದೊರೆ ಎನ್.ಗೌಡ, ಸದಾಶಿವ ಎಸ್.ಸಫಲಿಗ, ಅನಂತ ಸಿ.ನಾಯ್ಕ್, ಶೋಭನ್ ಎಸ್.ಸಾಲ್ಯಾನ್, ಸತೀಶ್ ಸಿ.ಗೌಡ, ಗಣೇಶ್ ಎಸ್.ಗೌಡ ಮತ್ತು ಸಂತೋಷ್ ಮಾಂಡವ್ಕಾರ್ ಉಪಸ್ಥಿತರಿದ್ದು ಅವರ ಸೇವೆಯನ್ನು ಪ್ರಶಂಸಿಸಿ ಗೌರವಿಸಲಾಯಿತು.
ಸೊಸೈಟಿಯ ಪ್ರಬಂಧಕ ಪರಶುರಾಮ್ ದೌಂಡ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ, ಸಭಾಕಲಾಪ ನಿರ್ವಹಿಸಿದರು. ಶಿಲ್ಪಾ ಎಸ್.ಮಾಂಡವ್ಕಾರ್ ಸೊಸೈಟಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನಿತ್ತರು. ಕೆ.ರಾಜೇ ಗೌಡ ವಂದನಾರ್ಪಣೆಗೈದರು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್








