ಮೂಡುಬಿದಿರೆ : ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ ಇದರ ವತಿಯಿಂದ ಮೂಡುಬಿದಿರೆಯ ಪದ್ಮಾವತಿ ಕಲಾ ಮಂದಿರದಲ್ಲಿ ಜು, 1-5 ರವರೆಗೆ “ಯಕ್ಷಾಯನ-2015” ನಡೆಯಲಿದೆ ಎಂದು ಕಲಾ ಮಂಡಳಿಯ ಕಾರ್ಯಧ್ಯಕ್ಷ ಎಂ.ದೇವಾನಂದ ಭಟ್ ತಿಳಿಸಿದ್ದಾರೆ.
ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. ಯಕ್ಷ ಕಲಾ ಮಿತ್ರ ಮಂಡಲಿಯು ಕಳೆದ 17 ವರ್ಷಗಳಿಂದ ಯಕ್ಷಗಾನ ವೈವಿಧ್ಯತೆಗಳನ್ನು ಪ್ರದರ್ಶಿಸುತ್ತಾ ಬಂದಿದ್ದು ಇದೀಗ 18 ನೇ ವರ್ಷದ ಯಕ್ಷಾಯನವನ್ನು ಅಪೂರ್ವ ಪ್ರಯೋಗಗಳೊಂದಿಗೆ ಪ್ರದರ್ಶಿಸಲಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಮೊದಲ ದಿನ ಕದಳಿ ಕಲಾ ಕೇಂದ್ರದ ವತಿಯಿಂದ ಜಾಂಬವತೀ ಕಲ್ಯಾಣ, ವಿವಿಧ ಯಕ್ಷ ಕಲಾವಿದರಿಂದ ಯಕ್ಷ ಗಾಯನ-ವಾದನ ವೈಭವ, ಜು.2ರಂದು ಸಂಜೆ 4.30ಕ್ಕೆ ಕಲಾವಿದ ಅರ್ಚಕ ದಿ.ಪದ್ಮನಾಭ ತಂತ್ರಿ ನಾರಾವಿ ಸಂಸ್ಮರಣೆ, ನಂತರ ಕಲಾ-ರಸ-ವಿರಸ ಸಂವಾದಗೋಷ್ಠಿ, ಜು.3ರಂದು 3.30ಕ್ಕೆ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ಹರಿದರ್ಶನ ನಂತರ ಕಲಾವಿದ ಲಾಡಿ ಕೃಷ್ಣ ಶೆಟ್ಟಿ ಸಂಸ್ಮರಣೆ ಹಾಗೂ ಕುರುಕ್ಷೇತ್ರ ಯಕ್ಷಗಾನ.
ಜು.4 ರಂದು 3.30ಕ್ಕೆ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ “ಭಾರತ”, ನಂತರ ಮೂಡುಬಿದಿರೆ ವನಜಾಕ್ಷಿ ಅಮ್ಮ ಸಂಸ್ಮರಣೆ ಹಾಗೂ ತುಳು ತಾಳಮದ್ದಳೆ”ತುಳುನಾಡ ಬಲಿಯೇಂದ್ರ” ಜು.5ರಂದು 3.30ಕ್ಕೆ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ “ರಾಮಾಯಣ” 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕುರಿಯ ಗಣಪತಿ ಶಾಸ್ತ್ರಿ ಮತ್ತು ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರಿಗೆ ಯಕ್ಷದೇವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ನಂತರ ಹಿರಣಾಕ್ಷ-ಹಿರಣಾಕ್ಷ-ಹಿರಣಾಕ್ಷ ಎಂಬ ಯಕ್ಷಗಾನ ನಡೆಯಲಿದೆ ಎಂದು ತಿಳಿಸಿದರು.
ಸಮಿತಿಯ ಕಾರ್ಯದರ್ಶಿ ರವಿಪ್ರಸಾದ್ ಕೆ.ಶೆಟ್ಟಿ, ಮಹಾವೀರ ಪಾಂಡಿ ಮತ್ತು ರಮೇಶ್ ಶೆಟ್ಟಿಗಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು
