ಮೂಡುಬಿದರೆ: ದ.ಕ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಬುಧವಾರ ಮಧ್ಯಾಹ್ನ ಇಲ್ಲಿನ ಪುರಸಭೆಗೆ ದಿಢೀರ್ ಭೇಟಿ ನೀಡಿ ಕಡತಗಳಪರಿಶೀಲಿಸಿ ಪುರಸಭೆ ಕಾರ್ಯನಿರ್ವಹಣೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ನೀರಿನ ಹಳೆ ಬಾಕಿ ವಸೂಲಿ ಆಗದಿರುವುದು, ಬಾಕಿ ಬಿಲ್ಲಿನ ಮೇಲೆ ಕನಿಷ್ಟ ಬಡ್ಡಿ ವಿಧಿಸದಿರುವುದು ಹಾಗೂ ಹಳೆ ಬಾಕಿಗಳ ಸಮರ್ಪಕ ವಿವರಗಳು ಕಂಪ್ಯೂಟರ್ನಲ್ಲಿ ಲಭ್ಯ ಇಲ್ಲದಿರುವುದಕ್ಕೆ ಜಿಲ್ಲಾಧಿಕಾರಿ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು. ನೀರಿನ ಶುಲ್ಕ ಸಂಗ್ರಹಕ್ಕಿಂತ ದುಪ್ಪಟ್ಟು ಹಣ ನಿರ್ವಹಣೆಗೆ ಖರ್ಚಾಗುತ್ತಿರುವುದರಿಂದ ಈ ವ್ಯತ್ಯಾಸವನ್ನು ಇಳಿಸಿ ಮುಂದೆ ಆದಾಯ ತರುವುದಕ್ಕೆ ಗಮನಹರಿಸಿ ಎಂದು ಮುಖ್ಯಾಧಿಕಾರಿಗೆ ಅವರು ಸೂಚಿಸಿದರು.

ಕಟ್ಟಡ ತೆರಿಗೆ ವಿವರಗಳು ಕೂಡ ಪುಸ್ತಕದಲ್ಲಿ ಸರಿಯಾಗಿ ದಾಖಲಾಗದೆ ಇದ್ದದನ್ನು ಜಿಲಾಧಿಕಾರಿ ಪರಿಶೀಲನೆ ವೇಳೆ ಪತ್ತೆ ಹಚ್ಚಿದರು. 2014-15ನೇ ಸಾಲಿನ ಕಾಮಗಾರಿಗಳ ಸಮರ್ಪಕ ವಿವರಗಳು ಎಂಜಿನಿಯರ್ ಬಳಿ ಇಲ್ಲದಿರುವುದು, ಕಟ್ಟಡ ನಿರ್ಮಾಣಕ್ಕೆ ಕೋರಿ ಸಲ್ಲಿಸಿದ ಅರ್ಜಿಗಳ ಮಾಹಿತಿಗಳು ಪುಸ್ತಕದಲ್ಲಿ ಸಮರ್ಪಕ ದಾಖಲಾಗದಿರುವುದಕ್ಕು ಡೀಸಿ ಅಸಮಧಾನಗೊಂಡರು.

