ಬಂಟ್ವಾಳ ತಾಲ್ಲೂಕಿನ ಹಲಸು ಪ್ರೇಮಿ ಕೂಟ ವತಿಯಿಂದ ಪಾಣೆಮಂಗಳೂರಿನಲ್ಲಿ ಭಾನುವಾರ ನಡೆದ ಪ್ರಥಮ ಹಲಸಿನ ಸಂತೆ ಕಾರ್ಯಕ್ರಮದಲ್ಲಿ ಹಲಸಿನಿಂದ ತಯಾರಿಸಿದ ವಿವಿಧ ಬಗೆ ಖಾದ್ಯಗಳನ್ನು ಗ್ರಾಹಕರು ಉತ್ಸಾಹದಿಂದ ಪಾಲ್ಗೊಂಡು ಖರೀದಿಸಿದರು.
ಪಾಣೆಮಂಗಳೂರು: ಪ್ರಥಮ ‘ಹಲಸಿನ ಸಂತೆ’ ಯಶಸ್ವಿ
ಬಂಟ್ವಾಳ: ತಾಲ್ಲೂಕಿನ ಹಲಸು ಪ್ರೇಮಿ ಕೂಟ ವತಿಯಿಂದ ಪಾಣೆಮಂಗಳೂರಿನಲ್ಲಿ ಪ್ರಥಮ ಬಾರಿಗೆ ಮೌನೇಶ್ ಮಲ್ಯ ನೇತೃತ್ವದಲ್ಲಿ ಭಾನುವಾರ ಏರ್ಪಡಿಸಿದ್ದ ‘ಹಲಸು ಸಂತೆ’ ಕಾರ್ಯಕ್ರಮದಲ್ಲಿ ನೂರಾರು ಮಂದಿ ಕೃಷಿಕರು ಮತ್ತು ಆಸಕ್ತ ನಾಗರಿಕರು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಗಿದೆ.
‘ಹಲಸು ಉಳಿಸಿ ಬೆಳಿಸಿ’ ಎಂಬ ಘೋಷಣೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಹಿರಿಯ ವೈದ್ಯ ಡಾ. ಕೆ.ಎಸ್. ಕಾಮತ್ ಕರಿಂಗಾನ ಇವರು ಉದ್ಘಾಟಿಸಿದರು.
ಕೃಷಿಕರು ವಾಣಿಜ್ಯ ಬೆಳೆ ಜೊತೆಗೆ ಹಣ್ಣು ಬೆಳೆಸುವ ಪ್ರವೃತ್ತಿ ಮೂಡಿಸಿಕೊಂಡಾಗ ಉತ್ಕøಷ್ಟ ಗುಣಮಟ್ಟದ ಆಹಾರ ದೊರೆತು ಆರೋಗ್ಯಪೂರ್ಣ ಸಮಾಜವೂ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು.
ಅರಣ್ಯ ಇಲಾಣೆ ನಿವೃತ್ತ ವಿಭಾಗೀಯ ಅರಣ್ಯಾಧಿಕಾರಿ ಗೇಬ್ರಿಯಲ್ ವೇಗಸ್, ತೋಟಗಾರಿಕಾ ಸಹಾಯಕ ನಿರ್ದೇಶಕ ಪಿ. ಸಂಜೀವ ನಾಯ್ಕ ಮಾತನಾಡಿ, ಹಲಸು ಬೆಳೆಸುವ ಕೃಷಿಕರ ಸಂಘಟನೆಗೆ ಸರ್ಕಾರದಿಂದ ಗರಿಷ್ಟ ಮೊತ್ತದ ಸಹಾಯಧನ ಸಿಗುತ್ತದೆ ಎಂದರು.

ಇದೇ ವೇಳೆ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಹಲಸಿನ ಹಣ್ಣಿನ ಹಲ್ವ ತಯಾರಿ ಯಂತ್ರದ ಪ್ರಾತ್ಯಕ್ಷಿಕೆ, ಹಲಸಿನ ಚಿಪ್ಸ್ ತಯಾರಿ ಯಂತ್ರ ಪ್ರದರ್ಶನ ಹಾಗೂ ವಿವಿಧ ಬಗೆಯ ಖಾದ್ಯಗಳು, ಹಪ್ಪಳ, ಹಲ್ವ, ಚಿರೋಟಿ, ಪಾಯಸ, ರಸಂ, ಔಷಧಿಯುಕ್ತ ಹರಿದ್ರಾರಸ ಪ್ರದರ್ಶನ ಮತ್ತು ಮಾರಾಟ ನಡೆಯಿತು.
ಎಚ್. ಸುಂದರ ರಾವ್ ಸ್ವಾಗತಿಸಿ, ನಾ. ಕಾರಂತ ಪೆರಾಜೆ ವಂದಿಸಿದರು.
