ಮಂಗಳೂರು: ಸುವರ್ಣ ಸುದ್ದಿ ವಾಹಿನಿ ಮಾರ್ಚ್ 27ರ ಗುರುವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ರಾಜಕಾರಣಿಗಳು ಮತ್ತು ಸಾರ್ವಜನಿಕರ ನೇರ ಚರ್ಚಾ ಕಾರ್ಯಕ್ರಮ ಮೆಗಾ ಫೈಟ್ ಹಿಂಸೆಯ ರೂಪ ಪಡೆದುಕೊಂಡಿತು. ವಿವಿಧ ರಾಜಕೀಯ ಪಕ್ಷದ ನೇತಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಾರ್ವಜನಿಕರು ಅವರಲ್ಲಿ ಪ್ರಶ್ನೆಗಳನ್ನು ಕೇಳಬಹುದಿತ್ತು. ಆದರೆ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಕುರಿತು ಕೇಳಲಾದ ಪ್ರಶ್ನೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರ ಮಧ್ಯೆ ಜಟಾಪಟಿ ನಡೆದು ಕಾರ್ಯಕ್ರಮ ಅಕ್ಷರಶಃ ಮೆಗಾ ಫೈಟಿಂಗ್ ಆಗಿ ಬದಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಿಂದ ಜನಾರ್ದನ ಪೂಜಾರಿ ಪರವಾಗಿ ರಮಾನಾಥ್ ರೈ, ಬಿಜೆಪಿಯಲ್ಲಿ ನಳಿನ್ ಕುಮಾರ್ ಕಟೀಲ್ ಪರವಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಆಪ್ ನ ವಾಸುದೇವ್ ಮತ್ತು ಸಿಪಿಐ(ಎಂ)ನಿಂದ ಯಾಧವ ಶೆಟ್ಟಿ ಭಾಗವಹಿಸಿದ್ದರು. ಆರಂಭದಲ್ಲಿ ಸಲೀಸಾಗಿ ಪ್ರಶ್ನೋತ್ತರಗಳು ನಡೆದವು ಆದರೆ ಎಸ್ ಡಿಪಿಐಯ ಕಾರ್ಯಕರ್ತನೊಬ್ಬ ಇದುವರೆಗೂ ಕಲ್ಲಡ್ಕ ಭಟ್ ರನ್ನು ಕಾಂಗ್ರೆಸ್ ಸರಕಾರ ಬಂಧಿಸಿಲ್ಲ. ಇದು ಅವರು ಅಲ್ಪಸಂಖ್ಯಾತರಿಗೆ ಮಾಡುತ್ತಿರುವ ದ್ರೋಹವಲ್ಲವೇ ಎಂದು ರಮಾನಾಥ್ ರೈಯವರನ್ನು ಪ್ರಶ್ನಿಸಿದ. ಇದರಿಂದ ಉದ್ರಿಕ್ತಗೊಂಡ ಬಿಜೆಪಿ ಬೆಂಬಲಿಗರು ರಾಜಕೀಯ ವೇದಿಕೆಯಲ್ಲಿ ಧಾರ್ಮಿಕ ಪ್ರಶ್ನೆಯೆತ್ತುವ ಅಗತ್ಯವಾದರೂ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಬೆಂಬಲಿಗರು ಈ ಪ್ರಶ್ನೆಯನ್ನು ಕೇಳುವ ಹಕ್ಕು ಅವರಿಗಿದೆ ಎಂದು ಸಮಜಾಯಿಷಿ ನೀಡಿದರು. ಇತ್ತಂಡಗಳ ಮಧ್ಯೆ ಮಾತಿಗೆಮಾತು ಬೆಳೆದು ಹಿಂಸೆಯ ರೂಪ ಪಡೆದುಕೊಂಡಿತು. ಈ ವೇಳೆ ಎಸ್ ಡಿಪಿಐ ಕಾರ್ಯಕರ್ತನೆನ್ನಲಾದ ವ್ಯಕ್ತಿಯೊಬ್ಬ ಮತ್ತಬ್ಬನ ಮುಖಕ್ಕೆ ಮಣ್ಣೆರಚಿದ ಿದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿತು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಲಾಠಿ ಪ್ರಹಾರ ನಡೆಸಿದರು. ಅಂತಿಮವಾಗಿ ಮೆಗಾ ಫೈಟ್ ನಿಜವಾದ ಫೈಟ್ ನೊಂದಿಗೆ ಕೊನೆಗೊಂಡಿತು.




