ದೆಹಲಿ: ಸ್ಪಾಟ್ ಫಿಕ್ಸಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದಿಂದ ಕಳಂಕಿತವಾಗಿರುವ ಐಪಿಎಲ್ ನ್ನು ಕೂಡಲೇ ಸ್ಥಗಿತಗೊಳಿಸಬೇಕು ಮತ್ತು ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಮನೆಗೆ ಕಳುಹಿಸಬೇಕೆಂದು ಟಿ20 ಪಂದ್ಯಾವಳಿಯ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರು ಹೇಳಿದ್ದಾರೆ.
ಐಪಿಎಲ್6ರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು. ಈ ಹಗರಣದಲ್ಲಿ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಅವರ ಹೆಸರು ಕೇಳಿ ಬಂದು ಸದ್ಯ ಅವರನ್ನು ರಕ್ಷಿಸುವ ಸಲುವಾಗಿ ಶ್ರೀನಿ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತ್ಯಜಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.
ಇದಕ್ಕೆ ಪೂರಕವೆಂಬತೆ ಸುಪ್ರೀಂ ಕೋರ್ಟ್ ಕೂಡಾ ಶ್ರೀನಿವಾಸನ್ ಹುದ್ದೆಯಿಂದ ಕೆಳಗಿಳಿಯದೆ ಪ್ರಕರಣದ ಪ್ರಾಮಾಣಿಕ ತನಿಖೆ ಅಸಾಧ್ಯವೆಂದು ಹೇಳಿತ್ತು. ಸದ್ಯ ಎಲ್ಲಾ ದಿಕ್ಕಿನಿಂದಲೂ ವಿರೋಧ ಎದುರಿಸುತ್ತಿರುವ ಶ್ರೀನಿ ಬಿಸಿಸಿಐ ಅಧ್ಯಕ್ಷ ಗಾದಿಯಿಂದ ಕೆಳಗಿಳಿಯಲು ದಿನ ಲೆಕ್ಕ ಮಾಡುತ್ತಿದ್ದಾರೆ. ಬಿಸಿಸಿಐ ಮಾಜಿ ಮುಖ್ಯಸ್ಥ ಶಶಾಂಕ್ ಮನೋಹರ್ ಕೂಡಾ ಶ್ರೀನಿವಾಸನ್ ಪದತ್ಯಾಗ ಮಾಡಬೇಕೆಂದು ತಿಳಿಸಿದ್ದಾರೆ.

