ವಿಟ್ಲ: ಕಂಬಳಬೆಟ್ಟು ದರ್ಗಾ ಸಮೀಪ ಮಂಗಳವಾರ ತಡರಾತ್ರಿ ನಡೆದ ಹಿಂದೂ ಯುವಕರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಳೇ ದ್ವೇಷದ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಈ ಹಲ್ಲೆ ನಡೆದಿದೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೆ ಧ್ವೇಷವೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.
ಕಂಬಳಬೆಟ್ಟು ಉರೂಸ್ನ ರಾತ್ರಿ ಲಿಂಗಪ್ಪ ಗೌಡ, ಶಶಿ, ಲೋಕೇಶ್ ಅವರು ಕರುಣಾಕರ ನಾಯ್ತೊಟ್ಟು ಎಂಬವರ ಜೀಪಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶರೀಫ್, ಬಶೀರ್, ರಫೀಕ್, ಅಬೂಬಕರ್, ಮನ್ಸೂರು, ಮುನ್ನ, ಮಟನ್ ಬಶೀರ್, ಖಲಂದರ್, ತೌಫಿಕ್, ರಜಾಕ್ ಕಂಬಳಬೆಟ್ಟು, ಶೌಕತ್, ಶಮೀರ್, ರಜಾಕ್ ಶಾಂತಿನಗರ ಮತ್ತು ಇತರರೊನ್ನುಳಗೊಂಡ ತಂಡ ಜಾಕಿಮೂಲೆ ಎಂಬಲ್ಲಿ ಜೀಪನ್ನು ತಡೆದು ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಮುಡ್ನೂರು ಗ್ರಾಮದ ಹಳದಿನಗರ ನಿವಾಸಿ ದಿ. ಬಾಪ ಕುಂಞಿ ಪುತ್ರ ಅಬ್ದುಲ್ ರಜಾಕ್(27), ಅಬ್ದುಲ್ ಬಶೀರ್(26), ನೆಕ್ಕರೆ ಕಂಬಳಬೆಟ್ಟು ನಿವಾಸಿ ಇಸುಬು(32), ಕಂಬಳಬೆಟ್ಟು ಶಾಂತಿನಗರ ನಿವಾಸಿ ಅಬ್ದುಲ್ ಮಜೀದ್(30), ಕಂಬಳಬೆಟ್ಟು ಶಾಂತಿನಗರ ನಿವಾಸಿ ಅಬ್ದುಲ್ ಸತ್ತಾರ್(38) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಶಾಫಿ, ಮನ್ಸೂರ್, ರಫೀಕ್, ಅಬೂಬಕ್ಕರ್, ಮುನ್ನಾ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದ್ದು, ಅವರ ಪತ್ತೆಗಾಗಿ ವಿಟ್ಲ ಪೊಲೀಸರು ಬಲೆ ಬೀಸಿದ್ದಾರೆ.

