ಮಂಗಳೂರು: ಸಮಸ್ತ ಕನ್ನಡಿಗರ ಹೆಮ್ಮೆ ವಿಜಯ ಕರ್ನಾಟಕ ಮಂಗಳೂರು ಆವೃತ್ತಿ ಇನ್ನು ಮುಂದೆ ಸಂಪೂರ್ಣ ವರ್ಣಮಯವಾಗಿ ಮುದ್ರಣಗೊಳ್ಳಲಿದೆ. ಮಂಗಳೂರಿನಲ್ಲಿ ಎಂಎಂಸಿಎಲ್ ಸಂಸ್ಥೆಯ ಇನ್ನೊಂದು ಅತ್ಯಾಧುನಿಕ ಮುದ್ರಣ ಘಟಕ ಬೈಕಂಪಾಡಿ ಕೈಗಾರಿಕೆ ಘಟಕದಲ್ಲಿ ಬುಧವಾರ ಚಾಲನೆಗೊಂಡಿದೆ.
ಟೈಮ್ಸ್ ಸಮೂಹದ ಮೆಟ್ರೊಪಾಲಿಟನ್ ಮೀಡಿಯಾ ಕಂಪನಿ ಲಿಮಿಟೆಡ್ ಸಂಸ್ಥೆಯ ನೂತನ ಸಂಪೂರ್ಣ ವರ್ಣಮಯ ಹಾಗೂ ಸ್ವಯಂಚಾಲಿತ ಮುದ್ರಣ ಘಟಕವನ್ನು ಸಂಸ್ಥೆಯ ಸಿಇಒ ಸುನಿಲ್ ರಾಜಶೇಖರ್ ಅವರು ಉದ್ಘಾಟಿಸಿದರು.
ಹೊಸ ಅನ್ವೇಷಣೆಯಂತೆ ಎಲ್ಲ ಪುಟಗಳೂ ವರ್ಣಮಯ ಮುದ್ರಣವಾಗುವ, ಶಾಯಿ ಮಿಶ್ರಣ, ಬಂಡಲ್ ಜೋಡಣೆ ಇತ್ಯಾದಿ ಸಂಪೂರ್ಣ ಸ್ವಯಂಚಾಲಿತವಾಗಿರುವ ಸಿಟಿ ಲೈನ್ ಯಂತ್ರ ಸ್ಥಾಪಿಸುವ ಮೂಲಕ ವಿಜಯ ಕರ್ನಟಕವನ್ನು ಓದುಗರಿಗೆ ಇನ್ನಷ್ಟು ಉತ್ತಮವಾಗಿ ನೀಡಲು ಸಾಧ್ಯವಾಗುತ್ತಿದೆ ಎಂದು ಸುನಿಲ್ ರಾಜಶೇಖರ್ ಹೇಳಿದರು.
ವಿಜಯ ಕರ್ನಾಟಕ ಪ್ರಧಾನ ಸಂಪಾದಕ ತಿಮ್ಮಪ್ಪ ಭಟ್ ಮಾತನಾಡಿ, ಇನ್ನು ಪತ್ರಿಕೆಯ ಒಳಪುಟಗಳೂ ವರ್ಣಮಯ ಆಗಲಿವೆ. ಉತ್ತಮ ಸುದ್ದಿ, ಗುಣಮಟ್ಟದ ಜತೆಗೆ ಪತ್ರಿಕೆಯನ್ನು ಆಕರ್ಷಕವಾಗಿ ನೀಡುವಲ್ಲಿ ಹೊಸ ಯಂತ್ರದ ಪಾತ್ರ ಮಹತ್ವದ್ದು ಎಂದರು.
ಎಂಎಂಸಿಎಲ್ ಸಂಸ್ಥೆಯ ಉಪಾಧ್ಯಕ್ಷ ಅಲೆನ್ ಕರ್ವಾಲೊ, ಮುದ್ರಣ ವಿಭಾಗದ ಮಹಾಪ್ರಬಂಧಕ ಶ್ರೀನಿವಾಸನ್, ಮ್ಯಾನೋಗ್ರಾಫ್ ಸಂಸ್ಥೆಯ ಮ್ಯಾನೇಜರ್ ಅಶಿತೋಷ್ ಹರ್ಷೆ, ರೆಸ್ಟಾನ್ಸ್ ವಿಭಾಗದ ಡೆಪ್ಯುಟಿ ಚೀಫ್ ಮ್ಯಾನೇಜರ್ ರಾಮಕೃಷ್ಣ ಡಿ, ವಿಜಯ ಕರ್ನಾಟಕದ ಸ್ಥಾನೀಯ ಸಂಪಾದಕ ಯು.ಕೆ.ಕುಮಾರ್ ನಾಥ್, ಮಂಗಳೂರು ಮುದ್ರಣ ವಿಭಾಗದ ಮುಖ್ಯಸ್ಥ ಗಿರೀಶ್ ಭಟ್ ಮತ್ತು ಮುದ್ರಣಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.
