- ಬಂಟ್ವಾಳ:ತಾಲ್ಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ನೇತ್ರಾವತಿ ನದಿತೀರದಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳ ತಂಡವು ದಿಡೀರ್ ದಾಳಿ ನಡೆಸಿ 9 ಬೋಡ್ಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಇಲ್ಲಿನ ನಗರ ಠಾಣೆ ಪೊಲೀಸರು ಸಹಿತ ಶನಿವಾರ ರಾತ್ರಿ ಈ ದಾಳಿ ನಡೆಸಲಾಗಿದ್ದು, ಅಲ್ಲಿ ರಾತ್ರಿ ಹಗಲು ಮರಳುಗಾರಿಕೆ ನಡೆಸುತ್ತಿದ್ದರೆನ್ನಲಾದ ಬಿಹಾರ ಮೂಲದ ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ.


ಭಾನುವಾರ ಮುಂಜಾನೆ ಮತ್ತೆ ಸ್ಥಳಕ್ಕೆ ತೆರಳಿದ್ದ ತಹಶೀಲ್ದಾರ್ ಈ ದಂಧೆ ಮತ್ತೆ ಮುಂದುವರಿಸಿದರೆ ಜಾಮೀನು ರಹಿತ ಬಂಧನ ಮಾಡುವುದಾಗಿ ಎಚ್ಚರಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆಯಷ್ಟೇ ಉಪವಿಭಾಗಾಧಿಕಾರಿ ಡಾ.ಅಶೋಕ್ ನೇತೃತ್ವದ ತಂಡವು ದಾಳಿ ನಡೆಸಿ ಲಕ್ಷಾಂತರ ಮೊತ್ತದ ಲಾರಿ, ಬೋಟ್ ಮತ್ತು ಮರಳು ವಶಪಡಿಸಿಕೊಂಡು ದಂಡ ವಿಧಿಸಿದ್ದರು.
ಇನ್ನೊಂದೆಡೆ ಇಲ್ಲಿನ ಅಕ್ರಮ ಮರಳುಗಾರಿಕೆ ದಂಧೆ ಮತ್ತೆ ಮುಂದುವರಿದಿದ್ದು, ಈ ದಂದೆಗೆ ಕಡಿವಾಣ ಹಾಕದಿದ್ದಲ್ಲಿ ಇದೇ 6ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದರು.
ಅಕ್ರಮ ಮರಳುಗಾರಿಕೆ ದಂಧೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಆರೋಪದ ನಡುವೆಯೇ ಸ್ಥಳಕ್ಕೆ
ಭೇಟಿ ನೀಡಿದ್ದ ಕಂದಾಯ ಇಲಾಖೆ ಸಿಬ್ಬಂದಿಗೆ ಹಲ್ಲೆ ನಡೆಸಿದ ಘಟನೆಯೂ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 20ಕ್ಕೂ ಮಿಕ್ಕಿ ಮಂದಿ ಉದ್ಯಮಿಗಳು ಮರಳು ದಂಧೆ ನಡೆಸುತ್ತಿದ್ದು, ಹಲವಾರು ಮಂದಿ ಕಾರ್ಮಿಕರು ರಾತ್ರಿ ಹಗಲು ಮರಳು ಮೇಲೆತ್ತುವ ಕಾಯಕದಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ಮೆಸ್ಕಾಂ ಅಧಿಕಾರಿಗಳು ಅಕ್ರಮವಾಗಿ ನದಿ ಕಿನಾರೆಗೆ ವಿದ್ಯುತ್ ಸಂಪರ್ಕವನ್ನೂ ಒದಗಿಸಿರುವುದು ಉಪವಿಭಾಗಾಧಿಕಾರಿ ಕಾರ್ಯಚರಣೆಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಘನವಾಹನ ಸಂಚಾರಕ್ಕೆ ನಿರ್ಬಂಧ:
ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಅಕ್ರಮ ಮರಳುಗಾರಿಕೆ ದಂಧೆಗೆ ಕಡಿವಾಣ ಹಾಕಲು ಟೆನ್ವೀಲ್ ಮೇಲಿನ ಲಾರಿಗಳಿಗೆ ಸಂಚಾರ ನಿರ್ಬಂಧಿಸಲಾಗಿದ್ದು,
ಶಿರಾಡಿ ಘಾಟಿಯಲ್ಲಿ ಸಹ ಸಂಚಾರ ನಿರ್ಬಂಧ ವಿಧಿಸಲಾಗಿದೆ ಎಂದು ಇನ್ಸ್ಪೆಕ್ಟರ್ ಕೆ. ಯು. ಬೆಳ್ಳಿಯಪ್ಪ ತಿಳಿಸಿದ್ದಾರೆ.
