ಮೂಡುಬಿದಿರೆ, ಏ. 6: ಇಲ್ಲಿಗೆ ಸಮೀಪದ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಶತಮಾನೋತ್ಸವ ಮತ್ತು ಬ್ರಹ್ಮಕಲಶೋತ್ಸವ ಈ ತಿಂಗಳ 8ರಿಂದ 14ರ ವರೆಗೆ ಶೃಂಗೇರಿ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ದಿವ್ಯೋಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮತ್ತು ದೇವಳ ಆಡಳಿತ ಮೊಕ್ತೇಸರ ಪಿ. ಎನ್. ರಾಜಾರಾಮ ತಿಳಿಸಿದ್ದಾರೆ.
ಏ. 8ರಂದು ಸಂಜೆ 4ರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಬಳಿಕ 5.30ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮೂಡುಬಿದಿರೆ ಡಾ. ಎಂ. ಮೋಹನ ಆಳ್ವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಸಚಿವ ಕೆ. ಅಭಯಚಂದ್ರ ಜೈನ್, ಸಂಸದ ನಳಿನ್ಕುಮಾರ್ ಕಟೀಲು, ಮಾಜಿ ಸಚಿವ ಅಮರನಾಥ ಶೆಟ್ಟಿ, ಚೌಟರ ಅರಮನೆ ಕುಲದೀಪ ಎಂ. ಮೊದಲಾದವರು ಅಭ್ಯಾಗತರಾಗಿರುವರು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಅಶ್ವತ್ಥಪುರ ಉಮಾನಾಥ ಬಳಗದವರ ನಾಗಸ್ವರ ವಾದನ ಕಛೇರಿ ಆಯೋಜಿಸಲಾಗಿದೆ.
ಏ. 12ರ ಸಂಜೆ ಶ್ರೀಕ್ಷೇತ್ರಕ್ಕೆ ಶೃಂಗೇರಿ ಜಗದ್ಗುರುಗಳು ಚಿತ್ತೈಸಲಿದ್ದು, ಅವರನ್ನು ವೈಭವದ ಮೆರವಣಿಗೆಯಿಂದ ಬರಮಾಡಿಕೊಳ್ಳಲಾಗುವುದು. ಮಂಜನಬೈಲು ಶ್ರೀ ಭವಾನೀಶಂಕರ ಸೇವಾಸಮಿತಿ ವತಿಯಿಂದ ಕ್ಷೇತ್ರಕ್ಕೆ ಸಮರ್ಪಣೆಯಾಗಲಿರುವ ಸುಮಾರು 8 ಲಕ್ಷ ರೂ. ವೆಚ್ಚದ ರಜತ ಪಲ್ಲಕಿಯನ್ನು ಏ. 11ರಂದು ಕಾರ್ಕಳದಿಂದ ಮೆರವಣಿಗೆ ಮೂಲಕ ತಂದು ಸನ್ನಿಧಿಗೆ ಸಮರ್ಪಿಸಲಾಗುವುದು.
ಏ. 9ರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಅಂದು ಅಖಂಡ ನಾಮಸ್ಮರಣೆ, ಶ್ರೀರಾಮ ದೇವರಿಗೆ ಲಕ್ಷ ತುಳಸಿ ಅರ್ಚನೆ, ಪಾರಾಯಣಗಳು ಆರಂಭಗೊಳ್ಳಲಿವೆ. ಅಥರ್ವಶೀರ್ಷ ಗಣಯಾಗ ಆಯೋಜಿಸಲಾಗಿದೆ. ಸಂಜೆ ಗಿರಿಧರ ಉಡುಪ ಮತ್ತು ತಂಡ ಬೆಂಗಳೂರು ಅವರಿಂದ ಪಕ್ಕವಾದ್ಯಗಳ ಮೇಳ ನಡೆಯಲಿದೆ. 10ರಂದು ಚಂಡಿಕಾ ಯಾಗ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಚೆನ್ನೈ ರಾಜೇಶ ವೈದ್ಯ ಅವರಿಂದ ವೀಣಾವಾದನ ಫೂಜನ್ ನಡೆಯಲಿದೆ. 11ರಂದು ರುದ್ರೈಕಾದಶಿನೀ ಹೋಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಧಾರವಾಡ ಎಂ. ವೆಂಕಟೇಶಕುಮಾರ್ ಅವರಿಂದ ಹಿಂದೂಸ್ಥಾನಿ ಸಂಗೀತ ಕಛೇರಿ ಆಯೋಜಿಸಲಾಗಿದೆ. 12ರಂದು ರಾಮಭದ್ರಕ ಹೋಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೃತ್ಯನಿಕೇತನ ಕೊಡವೂರು ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಏ. 13ರಂದು ಬೆಳಿಗ್ಗೆ 9.30ಕ್ಕೆ ಕುಂಭಾಭಿಷೇಕ ಬ್ರಹ್ಮಕಲಶೋತ್ಸವ ಮತ್ತು ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶೃಂಗೇರಿ ಉಭಯಶ್ರೀಗಳ ಆಶೀರ್ವಚನ, ಸ್ಮರಣಸಂಚಿಕೆ ಅನಾವರಣ, ರಾತ್ರಿ ರಜತಪಲ್ಲಕಿ ಉತ್ಸವ ಮತ್ತು ಪುಷ್ಪರಥೋತ್ಸವ ನಡೆಯಲಿದೆ. 14ರಂದು ಆಂಜನೇಯ ಹೋಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಧಾರೇಶ್ವರ ಯಕ್ಷಬಳಗದವರಿಂದ ಯಕ್ಷಗಾನ ನಡೆಯಲಿದೆ ಎಂದು ರಾಜಾರಾಮ್ ತಿಳಿಸಿದರು.
ಸಮಿತಿ ಗೌರವಾಧ್ಯಕ್ಷ ಕೊಪ್ಲು ಶ್ರೀನಿವಾಸ ರಾವ್, ಕಾರ್ಯದರ್ಶಿ ವಕೀಲ ಎಂ. ಸಿ. ಭಾಸ್ಕರ್, ಸಮಿತಿ ಕಾರ್ಯಕಾರಿ ಸದಸ್ಯರಾದ ಕೆ. ಪ್ರಭಾಕರ ಭಟ್, ವಿ. ಅಂಬರೀಶ ರಾವ್, ನಾಗೇಶ್ ತಾವರೆ ಮತ್ತು ಶಿವಶಂಕರ ಮಾಯಣ, ಪ್ರಚಾರ ಸಮಿತಿಯ ಕಿರಣ್ ಮಂಜನಬೈಲು, ಸಾಂಸ್ಕೃತಿಕ ಸಮಿತಿಯ ನವೀನ ಟಿ. ಆರ್. ಮೊದಲಾದವರಿದ್ದರು.