ಮೂಡುಬಿದರೆ: ಸ್ವಿಸ್ ಬ್ಯಾಂಕ್ನಿಂದ ಕಪ್ಪುಹಣ ತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದಾರೆ ಆರೋಪಿಸಿ ಹಾಗೂ ಮೋದಿ ಸರ್ಕಾರವು ಕೃಷಿಕರಿಗೆ ಮಾರಕವಾಗಿರುವ ಕೃಷಿ ಭೂಮಿ ಸ್ವಾಧೀನಪಡಿಸುವ ವಿಧೇಯಕನನ್ನು ಜಾರಿಗೊಳಿಸುವುದನ್ನು ವಿರೋಧಿಸಿ ಬ್ಲಾಕ್ ಕಾಂಗ್ರಸ್ ಕಚೇರಿಯೆದುರು ಪ್ರತಿಭಟನೆ ನಡೆಸಲಾಯಿತು.
ಸ್ವಿಸ್ ಬ್ಯಾಂಕಿನಲ್ಲಿರುವ ಭಾರತದ ಕಪ್ಪು ಹಣವನ್ನು 100 ದಿನದೊಳಗೆ ವಾಪಸ್ಸು ತಂದು ದೇಶದ ಪ್ರತೀ ನಾಗರಿಕನಿಗೆ 15ಲಕ್ಷ ನೀಡುವ ಭರವಸೆಯನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಮತ್ತು ಸಹಿಯಿರುವ ಚೆಕ್ ನ ಪ್ರತಿಕೃತಿಯನ್ನು ನಾಗರಿಕರಿಗೆ ಹಂಚುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಏ.18ರಂದು ಬೃಹತ್ ಪಾದಯಾತ್ರೆ:
ಜಿಲ್ಲಾ ಯುವ ಕಾಂಗ್ರಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ ನರೇಂದ್ರ ಮೋದಿ ಸರ್ಕಾರವು ಚುನಾವಣೆಯಲ್ಲಿ ಘೋಷಿಸಿದಂತೆ ಕೂಡಲೇ ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪುಹಣವನ್ನು ವಾಪಸ್ಸು ತಂದು ದೇಶದ ಪ್ರತೀ ನಾಗರಿಕನಿಗೆ 15ಲಕ್ಷ ರೂ ನೀಡಬೇಕು. ಇಲ್ಲದಿದ್ದಲ್ಲಿ ರಾಜೀನಾಮೆ ನೀಡಬೇಕು. ಕೃಷಿ ಭೂಮಿ ಸ್ವಾಧೀನ ವಿಧೇಯಕದ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಲಿದೆ. ಎಪ್ರಿಲ್ 18ರಂದು ಸುರತ್ಕಲ್ ನಿಂದ ಮಂಗಳೂರು ಕೇಂದ್ರ ಮೈದಾನದವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಭಟನೆ ನಡೆಸಲಾಗುವುದು. ಪಂಚಾಯಿತಿನ ಮೂಲೆ ಮೂಲೆಗಳಲ್ಲಿ ಜನಜಾಗೃತಿ ಮೂಡಿಸಲು ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರವು ಜನರ ಪರವಾಗಿ ಕೆಲಸ ಮಾಡುತ್ತಿಲ್ಲ. ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಜನರು ಜಾಗೃತರಾಗಬೇಕು ಎಂದರು. ಮೂಡುಬಿದಿರೆ ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಸುರತ್ಕಲ್ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಗಿರೀಶ್ ಆಳ್ವ, ಮೂಡುಬಿದರೆ ಪುರಸಭಾಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಮೂಡುಬಿದಿರೆ ಬ್ಲಾಕ್ ಕಾಂಗ್ರಸ್ ಉಪಾಧ್ಯಕ್ಷ ಸುರೇಶ್ ಪ್ರಭು, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ಅನಿಲ್ ಲೋಬೋ, ಮುಖಂಡರಾದ ಶಿವಾನಂದ ಪಾಂಡ್ರು, ಜೊಸ್ಸಿ ಮೆನೇಜಸ್, ಮಹಮ್ಮದ್ ಅಸ್ಲಾಂ, ಸುಂದರ ಸಿ. ಪೂಜಾರಿ, ವಾಸುಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.