ಬಂಟ್ವಾಳ : ಭಾರತೀಯ ಸಮಾಜದ ತಳಹದಿ ನಿಂತಿರುವುದು ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯಾತೀತ ತತ್ವಗಳ ಮೇಲಲ್ಲ, ಭಾರತೀಯ ಸಮಾಜದ ತಳಹದಿ ಜಾತಿ, ಇದರಿಂದಾಗಿಯೇ ದೇಶದ ಪ್ರತಿಯೊಂದು ಆಗುಹೋಗು-ತೀರ್ಮಾನಗಳಲ್ಲಿ ಜಾತಿ ಪ್ರಬಲ ಪಾತ್ರವಹಿಸುತ್ತಿದೆ ಎಂದು ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಲ್ ಸಲಾಂ ಪುತ್ತಿಗೆ ಅಭಿಪ್ರಾಯ ಪಟ್ಟಿದ್ದಾರೆ.

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ದ.ಕ.ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಬಿ.ಸಿ.ರೋಡಿನ ಕೃಷ್ಣಿಮಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಜನಗಣತಿ ಮಾಹಿತಿ ಶಿಬಿರದಲ್ಲಿ ಜಾತಿಗಣತಿ ಕುರಿತಾಗಿ ಮಾಹಿತಿ ನೀಡಿದರು. 1872 ರಲ್ಲಿ ಭಾರತದಲ್ಲಿ ಮೊದಲ ಜಾತಿಗಣತಿ ನಡೆದಿದ್ದು, ಇದು ಸಾಮಾಜಿಕ ನ್ಯಾಯದ ಮೊದಲ ಹೆಜ್ಜೆ ಎಂದ ಅವರು, ಬಳಿಕ 1931 ರಲ್ಲಿ ನಡೆದ ಜಾತಿಗಣತಿ ನಡೆದಿದ್ದು, ಇದರ ಆಧಾರದಲ್ಲಿಯೇ ಈಗಿನ ಸರ್ಕಾರಗಳ ಯೋಜನೆಗಳು, ಅನುದಾನಗಳು ಹಂಚಿಕೆಯಾಗುತ್ತಿದೆ. ಜಾತಿಗಣತಿಯಾಗಬೇಕೆಂಬುದು ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಬಹುವರ್ಷಗಳ ಬೇಡಿಕೆಯಾಗಿದ್ದರೂ, ಇದು ಸಂಘಟಿತ ಧ್ವನಿಯಾಗಿ ಆಂದೋಲನದ ರೂಪ ತಾಳದೇ ಇದ್ದುದರಿಂದ ಜಾತಿಗಣತಿ ವಿಳಂಬವಾಗಿ ನಡೆಯುತ್ತಿದೆ ಎಂದರು.
ಭಾರತದಲ್ಲಿ ಮುಸ್ಲಿಂ ಸಮುದಾಯದವರ ಸ್ಥಿತಿ ದಲಿತರಿಗಿಂತಲೂ ಹೀನಾಯಸ್ಥಿತಿಯಲ್ಲಿರುವುದು ನ್ಯಾಷನಲ್ ಸ್ಯಾಂಪಲ್ ಸರ್ವೆಗಳ ಅಂಕಿಅಂಶಗಳಿಂದ ಸಾಬೀತಾಗಿದೆ, ಆದರೆ ಬೇರೆ ಬೇರೆ ಕಾರಣಗಳಿಂದ ಇದು ಚರ್ಚೆ ಯಾಗುತ್ತಿಲ್ಲ ಎಂದ ಅವರು ಈ ನಿಟ್ಟಿನಲ್ಲಿ ಎ.11 ರಿಂದ 30 ರವರೆಗೆ ನಡೆಯಲಿರುವ ಜಾತಿಗಣತಿ ಮುಸ್ಲಿಂ ಸಮುದಾಯದ ಭವಿಷ್ಯದ ದೃಷ್ಟಿಯಲ್ಲಿ ಹೆಚ್ಚು ಆಶಾದಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಜಾತಿಗಣತಿಯ ಬಗ್ಗೆ ವ್ಯಾಪಕ ಪ್ರಚಾರ ನಡೆಯಬೇಕು, ನಿಖರ ಮಾಹಿತಿ ಗಣತಿದಾರರ ಮೂಲಕ ಸರ್ಕಾರಕ್ಕೆ ಸಲ್ಲಿಕೆಯಾಗಬೇಕು ಎಂದ ಅವರು, ಗಣತಿಯ ಪ್ರಶ್ನಾವಳಿ ಹಾಗೂ ಉತ್ತರದ ಕೋಡ್ಗಳ ಬಗ್ಗೆಯೂ ಮನೆಮನೆಗೆ ಮಾಹಿತಿ ತಲುಪಿಸುವ ಕಾರ್ಯ ನಡೆಯಬೇಕೆಂದರು. ಸಾಮಾಜಿಕ ಕಾರ್ಯಕರ್ತರೂ ದೊಡ್ಡ ಸಂಖ್ಯೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಈ ಸಮೀಕ್ಷೆಯಶಸ್ವಿಯಾಗಲು ಸಾಧ್ಯ ಎಂದ ಅವರು, ಗಣತಿದಾರರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸಲಹೆನೀಡಿದರು.
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದರಾಜ್ಯ ಸಮಿತಿ ಸದಸ್ಯ ಹನೀಫ್ ಖಾನ್ ಕೊಡಾಜೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಪುರಸಭಾ ಸದಸ್ಯ ಇಕ್ಬಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಿಯಾಝ್ ಫರಂಗಿಪೇಟೆ ಸ್ವಾಗತಿಸಿದರು. ಆಶಿಕ್ ಕಾರ್ಯಕ್ರಮ ನಿರ್ವಹಿಸಿದರು. ಪುರಸಭಾ ಸದಸ್ಯ ಮೊನಿಶ್ ಆಲಿ ವಂದಿಸಿದರು


