ಮೀರ್ಪುರ: ಟೀಂ ಇಂಡಿಯಾದ ಸಂಘಟಿತ ಸ್ಪಿನ್ ದಾಳಿಗೆ ತರಗೆಲೆಯಂತೆ ಉದುರಿದ ವೆಸ್ಟ್ ಇಂಡೀಸ್ ಎದುರು ಭಾರತ ಸುಲಭ ಜಯ ದಾಖಲಿಸಿತು. ಭಾನುವಾರ ಮೀರ್ಪುರದ ಶೇರ್ ಎ ಬಾಂಗ್ಲಾ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಸಮರದಲ್ಲಿ ಟೀಂ ಇಂಡಿಯಾ ವಿಂಡೀಸ್ ತಂಡವನ್ನು 7 ವಿಕೆಟ್ ಅಂತರದಿಂದ ಮಣಿಸಿದೆ.
ಟಾಸ್ ಗೆದ್ದ ಧೋನಿ ಮೊದಲು ವಿಂಡೀಸನ್ನು ಬ್ಯಾಟಿಂಗ್ ಗಿಳಿಸಿದರು. ಆರಂಭದಲ್ಲಿ ಕೆಲವು ಕ್ಯಾಚ್ ಡ್ರಾಪ್ ಮತ್ತು ಮಿಸ್ ಫೀಲ್ಡಿಂಗ್ ಗಳ ನಂತರ ಟೀಂ ಇಂಡಿಯಾ ಗಂಭೀರ ಕ್ರಿಕೆಟ್ ಆಡುವತ್ತ ಚಿತ್ತ ನೆಟ್ಟಿತು. ಒಂದೆಡೆ ಭುವನೇಶ್ವರ್ ಕುಮಾರ್ ತನ್ನ 3 ಓವರ್ ಗಳಲ್ಲಿ ಕೇವಲ 3 ರನ್ ನೀಡಿದರೆ ಮಹಮ್ಮದ್ ಶಮಿ ತನ್ನ 3 ಓವರ್ ಗಳಲ್ಲಿ 27 ರನ್ ನೀಡಿ ದುಬಾರಿ ಬೌಲರ್ ಎನಿಸಿದರು. ವಿಂಡೀಸ್ ನ ಬಿಗ್ ಹಿಟ್ಟರ್ ಕ್ರಿಸ್ ಗೇಲ್ ಎರಡು ಜೀವದಾನ ಪಡೆದರೂ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲರಾದರು. ಗೇಲ್ 34 ರನ್ ಗೆ ಔಟಾದರೆ ಸ್ಮಿತ್, ಅಶ್ವಿನ್ ತನ್ನದೇ ಬೌಲಿಂಗ್ ನಲ್ಲಿ ಹಿಡಿದ ಅದ್ಭುತ ಕ್ಯಾಚ್ ನಿಂದಾಗಿ 11 ರನ್ ಗೆ ಪೆವಿಲಿಯನ್ ಸೇರಿದರು. ಆಸ್ವಿನ್, ಮಿಶ್ರಾ ಮತ್ತು ಜಡೇಜಾ ತ್ರಯರ ಸ್ಪಿನ್ ಮೋಡಿಗೆ ಸಿಲುಕಿದ ವಿಂಡೀಸ್ ಆಟಗಾರರು ರನ್ ಗಳಿಸಲು ಪರದಾಡಬೇಕಾಯಿತು. ಸ್ಯಾಮ್ಯುವೆಲ್ಸ್ ಮತ್ತು ಸಿಮನ್ಸ್ ಕೊಂಚ ಪ್ರತಿರೋಧ ತೋರಿದರೂ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ವಿಂಡೀಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತು. ರವೀಂದ್ರ ಜಡೇಜಾ ಎದುರಾಳಿ ಪಾಳಯದ 3 ವಿಕೆಟ್ ಕಿತ್ತರೆ, ಅಮಿತ್ ಮಿಶ್ರಾ 2 ಮತ್ತು ಅಶ್ವಿನ್ 1 ವಿಕೆಟ್ ಪಡೆದರು.

ಟೀಂ ಇಂಡಿಯಾ ಆರಂಭ ಕೂಡಾ ಅಷ್ಟೊಂದು ಚೆನ್ನಾಗಿರಲಿಲ್ಲ. ಶಿಖರ್ ಧವನ್ ಸೊನ್ನೆ ಸುತ್ತಿ ಮರಳಿದಾಗ ತಂಡದಲ್ಲಿ ನಿರಾಶಾ ಭಾವ ಮೂಡಿತು. ಆದರೆ ಮತ್ತೊಂದು ಕಡೆಯಲ್ಲಿ ರೋಹಿತ್ ಶರ್ಮಾ(62) ಕೆಚ್ಚೆದೆಯ ಆಟ ಪ್ರದರ್ಶಿಸಿ ತಂಡಕ್ಕೆ ನೆರವಾದರು. ಎರಡನೇ ವಿಕೆಟ್ ಗೆ ಶರ್ಮಾ ಜೊತೆಯಾದ ವಿರಾಟ್ ಕೊಹ್ಲಿ(54) ಅದ್ಬುತ ಆಟ ಪ್ರದರ್ಶಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು. ಯುವರಾಜ್ ಸಿಂಗ್(10) ಎರಡನೇ ಪಂದ್ಯದಲ್ಲೂ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಎಡವಿದರು. ಅಂತಿಮವಾಗಿ ಇನ್ನೂ 2 ಎಸೆತ ಉಳಿದಿರುವಂತೆ ಟೀಂ ಇಂಡಿಯಾ ಗೆಲುವಿನ ರನ್ ಬಾರಿಸಿ ಕೇಕೆ ಹಾಕಿತು. ಅಮಿತ್ ಮಿಶ್ರಾ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಪಡೆದರು.

