ಬಂಟ್ವಾಳ: 3ನೇ ವರ್ಷದ ಪಚ್ಚೆಪರ್ಬ ಮಕ್ಕಳ ರಾಜ್ಯಮಟ್ಟದ ರಜಾ ಶಿಬಿರಕ್ಕೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಉಜಿರಂಡಿಪಲ್ಕೆಯ ಹಸಿರು ಅಂಗಳ ಸಜ್ಜಾಗುತ್ತಿದೆ. ರಂಗಸಾಂಗತ್ಯ ಮಣಿನಾಲ್ಕೂರು ಮತ್ತು ಅರಿವು ಪಚ್ಚೆ ಬಳಗ ಬಂಟ್ವಾಳ ಆಯೋಜನೆಯಲ್ಲಿ ನಮ್ಮದು ನೆಲದ ಸಂಸ್ಕøತಿ ಎಂಬ ಆಶಯ ವಾಕ್ಯದೊಂದಿಗೆ ಎಪ್ರಿಲ್ 11, 12 ಮತ್ತು 13ರಂದು ಉಜಿರಂಡಿಪಲ್ಕೆಯ ಸಹಜ ಪರಿಸರದಲ್ಲಿ ಶಿಬಿರವು ಅನಾವರಣಗೊಳ್ಳಲಿದೆ.
ಹಸಿರು ಬದುಕನ್ನು ಎಚ್ಚರಿಸುವ ಮತ್ತು 3ದಿನಗಳು ಹಸಿರಾಗಿ ಬದುಕುವ ಆಶಯ ಈ ಶಿಬಿರದ್ದು. 3 ದಿನಗಳಲ್ಲಿ ಮಣ್ಣು, ನೀರು, ನೆಲ, ಮರ, ಗಾಳಿ ಮುಂತಾದ ಎಲ್ಲರ ಅಗತ್ಯಗಳ ಬಗೆಗೆ ಹಾಡು, ಆಟ, ಊಟ, ನಾಟಕ, ಸಂವಾದಗಳ ಮೂಲಕ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತದೆ. ವಿವಿಧ ಸಂಪನ್ಮೂಲ ವ್ಯಕ್ತಿಗಳು, ರಾಜ್ಯದ ವಿವಿಧೆಡೆಗಳಿಂದ ವಿಶೇಷ ಅತಿಥಿಗಳು ಆಗಮಿಸಿ ಮಕ್ಕಳೊಂದಿಗೆ ತಮ್ಮ ಸಮಯ ಕಳೆಯಲಿದ್ದಾರೆ.
ಈ ಪಚ್ಚೆಪರ್ಬದಲ್ಲಿ ವಿಶೇಷವಾಗಿ ಎ.11ರಂದು ‘ಪರಿಸರ ಮಿತ್ರ’ ಜಿಲ್ಲಾ ಪ್ರಶಸ್ತಿ ವಿಜೇತ ಸ.ಹಿ.ಪ್ರಾ.ಶಾಲೆ ಕೆದ್ದಳಿಕೆ ಇಲ್ಲಿನ 100ಕ್ಕೂ ಹೆಚ್ಚಿನ ಮಕ್ಕಳು ಇಡೀ ದಿನ ಪಾಲ್ಗೊಳ್ಳಲಿದ್ದು ಮಧ್ಯಾಹ್ನ 2 ರಿಂದ ಕೆದ್ದಳಿಕೆ ಶಾಲಾ ಮಕ್ಕಳಿಂದ ಮೌನೇಶ ವಿಶ್ವಕರ್ಮ ರಚನೆ/ನಿರ್ದೇಶನದ ನಾಟಕ ‘ಭೂಮಿ’, ಸಂಜೆ 3.30ಕ್ಕೆ ಬಂಟ್ವಾಳ ಎಸ್.ವಿ.ಎಸ್. ದೇವಳ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮಕ್ಕಳಿಂದ ಕೃಷ್ಣಪ್ಪ ಬಂಬಿಲ ನಿರ್ದೇಶನದ ನಾಟಕ ‘ಮಾಯಾಲೋಕ’
ಎ.12ರಂದು ಬೆಳಗ್ಗೆ 9.30ರಿಂದ ‘ಸಿಂಪನಿ’ ಮಕ್ಕಳ ಪತ್ರಿಕೆ ಬಳಗದಿಂದ ಹಾಡು-ಓದಿನಾಟ-ನಾಟಕ, ಮಧ್ಯಾಹ್ನ 12ರಿಂದ ನಡೆಯುವ ‘ಪ್ರಕೃತಿ ವಂದನೆ’ ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಭತ್ತದ ತಳಿಗಳನ್ನು ಬೆಳೆದು ಸಂಗ್ರಹಿಸುತ್ತಿರುವ ಕೃಷಿಕ ಬಿ.ಕೆ. ದೇವರಾವ್ ಬೆಳ್ತಂಗಡಿ, ಪರಿಸರ ಹೋರಾಟಗಾರ ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಸಾಂದೀಪನಿ ಮಠ ಕೇಮಾರು, ನೆಲದ ಸಂಸ್ಕ್ರತಿಯ ನೆನಪು ಅಕ್ಕಮ್ಮ ಗುಡ್ಡೆಬೊಟ್ಟ, ಶಿಕ್ಷಣ ತಜ್ಞ ಮಹಾಬಲೇಶ್ವರ ಹೆಬ್ಬಾರ್, ಕೃಷಿಕ ಪುತ್ತು ಮೋನಾಕ್ಕ, ಜಾನಪದ ಕಲಾವಿದೆ ಶಾರದಾ ಜಿ. ಬಂಗೇರ ಭಾಗವಹಿಸುವರು.
ರಾತ್ರಿ 7ಕ್ಕೆ ಪ್ರಕೃತಿ ಆರಾಧನೆ, ರಾತ್ರಿ 10ಕ್ಕೆ ವನಭೋಜನ, ಎ.13ರಂದು ಅರಿವು ಪಚ್ಚೆ ಬಳಗದಿಂದ ಪ್ರಕೃತಿ ಗಾಯನ ಮತ್ತು ಪ್ರಕೃತಿ ರಂಗ ನಾಟಕ ನಡೆಯಲಿದೆ. ಸಂಜೆ 3ರಿಂದ ಶಿಬಿರ ಸಮಾರೋಪ ನಡೆಯಲಿದೆ.
