ಬಂಟ್ವಾಳ : ಸಜಿಪಮೂಡ ಗ್ರಾಮದ ಬೊಳ್ಳಾಯಿ-ಪಟ್ಟುಗುಡ್ಡೆ ಎಂಬಲ್ಲಿ ಸಾರ್ವಜನಿಕರ ವಿರೋಧ ಹಾಗೂ ಪಂಚಾಯತ್ರಾಜ್ ಕಾಯ್ದೆ ಉಲ್ಲಂಘಿಸಿ ಜನವಸತಿ ಪ್ರದೇಶದಲ್ಲಿ ಹಿಂದೂ ಸ್ಮಶಾನ ನಿರ್ಮಿಸುತ್ತಿರುವುದರ ವಿರುದ್ದ ತೀವ್ರ ಆಕ್ರೋಶಗೊಂಡ ಸ್ಥಳೀಯ ನಾಗರಿಕರು ಬುಧವಾರ ಬಿ ಸಿ ರೋಡಿನ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಧರಣಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಮಾಹಿತಿ ಹಕ್ಕು ಕಾರ್ಯಕರ್ತ ಗಣಪತಿ ಭಟ್ ಅವರು ಸಜಿಪಮೂಡ ಗ್ರಾಮದ ಬಾಬ್ತು ಸರ್ವೆ ನಂಬ್ರ 246/1ಎ2 ರಲ್ಲಿ 0.45 ಎಕ್ರೆ ಜಮೀನನ್ನು ಸರಕಾರ ಸಾರ್ವಜನಿಕ ಸ್ಮಶಾನಕ್ಕಾಗಿ ಕಾಯ್ದಿರಿಸಿದ್ದು, ಬಳಿಕ ಕೆಲ ಪ್ರಭಾವಿ ವ್ಯಕ್ತಿಗಳು ತಮ್ಮ ಜಮೀನು ಉಳಿಸಿಕೊಳ್ಳುವ ಉದ್ದೇಶದಿಂದ ಸ್ಮಶಾನಕ್ಕೆ ಮಂಜೂರಾದ ಜಮೀನನ್ನು ಬಿಟ್ಟು ಸವರ್ೆ ನಂಬ್ರ 246/1ಎ1ಬಿಯಲ್ಲಿ ಅನಧಿಕೃತ ಕಣ್ಣಳತೆಯ ನಕ್ಷೆಯಂತೆ ಸ್ಥಳ ಗುರುತಿಸುವಂತೆ ಅಧಿಕಾರಿಗಳನ್ನು ದಾರಿ ತಪ್ಪಿಸಿ ಅಲ್ಲೇ ಸ್ಮಶಾನ ಕಾರ್ಯ ಪ್ರಾರಂಭಿಸಿದ್ದಾರೆ. ಈ ಬಗ್ಗೆ ಸಹಾಯಕ ಆಯುಕ್ತರು ನೀಡಿರುವ ಆದೇಶ ಕಾನೂನು ಬಾಹಿರ ಹಾಗೂ ಅಧಿಕಾರ ದುರ್ಬಳಕೆ ಎಂದು ಆರೋಪಿಸಿದರಲ್ಲದೆ ಸದ್ರಿ ಸ್ಥಳದ 100 ಮೀಟರ್ ವ್ಯಾಪ್ತಿಯಲ್ಲಿ 30 ವಾಸ್ತವ್ಯದ ಮನೆಗಳು, 4 ಕುಡಿಯುವ ನೀರಿನ ಬಾವಿಯಿರುತ್ತದೆ. ಇದು ಪಂಚಾಯತ್ರಾಜ್ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಸ್ಮಶಾನ ಭೂಮಿಯನ್ನು ಸಜಿಪಮೂಡ ಗ್ರಾಮದಲ್ಲೇ ನಿರ್ಮಿಸಲಿ. ಸರಕಾರಿ ಜಮೀನು ಗ್ರಾಮದಲ್ಲಿ ಬೇಕಾದಷ್ಟಿದೆ. ಜನ ಹಿತಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸ್ಮಶಾನ ನಿರ್ಮಾಣಕ್ಕೆ ಗ್ರಾಮಸ್ಥರು ಜಾತಿ-ಮತ ಬೇಧ ಮರೆತು ಒಗ್ಗಟ್ಟಾಗಿ ಸಹಕಾರ ನೀಡುತ್ತಾರೆ. ಆದರೆ ಪ್ರಸ್ತುತ ಪ್ರಸ್ತಾಪಿತ ಜಮೀನಿನಲ್ಲಿ ಸ್ಮಶಾನ ನಿರ್ಮಾಣ ಅದು ಪಂಚಾಯತ್ರಾಜ್ ಕಾಯ್ದೆಯ ಕಲಂ 95, 96, 88, 92, 93 ಹಾಗೂ 94(2) ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಗಣಪತಿ ಭಟ್ ವಿವರಿಸಿದರು.
ಬಳಿಕ ಪತಿಭಟನಾಕಾರರು ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಿದರು.
