ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಕರಿಂಜೆ ಗ್ರಾಮದ 21ನೇ ವಾರ್ಡ್ ನಿಂದ ಪುರಸಭೆಗೆ ಚುನಾಯಿತರಾಗಿದ್ದ ಅನಿಲ್ ಲೋಬೊ ಅವರ ಸದಸ್ಯತ್ವವನ್ನು ಹೈಕೋರ್ಟ್ ರದ್ದುಗೊಳಿಸಿದೆ ಎಂದು ಪುರಸಭಾ ಮಾಜಿ ಸದಸ್ಯ ಕೆ.ಕೃಷ್ಣರಾಜ ಹೆಗ್ಡೆ ತಿಳಿಸಿದ್ದಾರೆ.
ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. 2013ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಅನಿಲ್ ಲೋಬೊ ಹಿಂದುಳಿದ ವರ್ಗ ‘ಬಿ’ ಮೀಸಲಾತಿಯ ಪ್ರಯೋಜನ ಪಡೆದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ತನ್ನ ಪ್ರತಿಸ್ಪರ್ಧೆ ಜೆಡಿಎಸ್ನ ಕೃಷ್ಣರಾಜ ಹೆಗ್ಡೆ ವಿರುದ್ಧ ಜಯಗಳಿಸಿದ್ದರು.

`ಅನಿಲ್ ಲೋಬೊ ಆದಾಯ ತೆರಿಗೆ ಪಾವತಿದಾರರಾಗಿರುವುದರಿಂದ ‘ಬಿ’ ವರ್ಗದ ಮೀಸಲಾತಿ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿರುವುದು ಕಾನೂನುಬಾಹಿರವಾಗಿರುತ್ತದೆ. ಅವರ ಪುರಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು’ ಎಂದು ಕೋರಿ ಪ್ರತಿಸ್ಪರ್ಧಿ ಕೃಷ್ಣರಾಜ ಹೆಗ್ಡೆ ಕಾರ್ಕಳ ಕೋರ್ಟ್ ನಲ್ಲಿ ಚುನಾವಣಾ ತಕರಾರು ಅರ್ಜಿ ಅಲ್ಲಿಸಿದ್ದರು. ಆದರೆ ಕಾರ್ಕಳ ಕೋರ್ಟ್ ನಲ್ಲಿ ಅವರ ಅರ್ಜಿ ತಿರಸ್ಕೃತಗೊಂಡಾಗ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಎ.ವಿ ಚಂದ್ರಶೇಖರ್ ಅವರಿದ್ದ ಏಕಸದಸ್ಯ ಪೀಠದಲ್ಲಿ ಸುಮಾರು ಒಂದು ವರ್ಷ ವಿಚಾರಣೆ ನಡೆದು ಅಂತಿಮವಾಗಿ ಅನಿಲ್ ಲೋಬೊ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ತೀರ್ಪ್ ನೀಡಿದೆ.
ಅರ್ಜಿ ದಾರರ ಪರ ವಕೀಲ ಜಿ. ಬಾಲಕೃಷ್ಣ ಶಾಸ್ತ್ರಿ ವಾದಿಸಿದ್ದರು ಎಂದು ಹೆಗ್ಡೆ ಹೇಳಿದರು.
