ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಹಕಾರ ಭಾರತಿ ಮತ್ತು ಸಹಕಾರಿ ಪ್ರಕೋಷ್ಠ ವತಿಯಿಂದ ಸಹಕಾರಿ ಸೊಸೈಟಿ ನಿರ್ದೇಶಕರಿಗೆ ತರಬೇತಿ ಕಾರ್ಯಕ್ರಮವನ್ನು ಇದೇ 17ರಂದು ಬೆಳಿಗ್ಗೆ ಬಿ.ಸಿ.ರೋಡ್ನ ಲಯನ್ಸ್ ಸೇವಾ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ.ಆನಂದ ಅವರು ಸೋಮವಾರ ಬಿ.ಸಿ.ರೋಡ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಈಗಾಗಲೇ ಒಟ್ಟು 29 ಸಹಕಾರಿ ಸಂಸ್ಥೆಗಳ ಪೈಕಿ 21ಮಂದಿ ನಿರ್ದೇಶಕರು ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಸದಸ್ಯರಾಗಿದ್ದಾರೆ. ಒಟ್ಟು 84 ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ 53ಕ್ಕೂ ಮಿಕ್ಕಿ ಮಂದಿ ಸಹಕಾರ ಭಾರತಿ ಸದಸ್ಯರಿದ್ದು, ಒಟ್ಟು 202 ಮಂದಿ ನಿರ್ದೇಶಕರು ಸಹಕಾರ ಭಾರತಿ ಮೂಲಕ ಗುರುತಿಸಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.
ಭಾನುವಾರ ಬಂಟ್ವಾಳದಲ್ಲಿ ನಡೆದ ಸಮಾಜ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಒಟ್ಟು 15 ಮಂದಿ ನಿರ್ದೇಶಕರ ಪೈಕಿ 14ಮಂದಿ ಹೊಸ ನಿರ್ದೇಶಕರು ಸಹಕಾರ ಭಾರತಿ ಸದಸ್ಯರಾಗಿದ್ದಾರೆ.ತಾಲ್ಲೂಕಿನ ಪಾಣೆಮಂಗಳೂರಿನಲ್ಲಿ ಬಿಜೆಪಿ ಸದಸ್ಯರ ವಿರುದ್ಧ ಸ್ವತಃ ಬಿಜೆಪಿ ಕಾರ್ಯಕರ್ತರು ಸ್ಪರ್ಧಿಸಿದ ಪ್ರಸಂಗವೂ ನಡೆದಿದ್ದು, ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು . ಸುದ್ದಿಗೋಷ್ಠಿಯಲ್ಲಿ ಜಯಶಂಕರ ಬಾಸ್ರಿತ್ತಾಯ, ರವೀಂದ್ರ ಕಂಬಳಿ, ಕಾಡಬೆಟ್ಟು ಪ್ರಮೋದ್ ಕುಮಾರ್ ರೈ, ಪುರುಷೋತ್ತಮ ಸಾಲ್ಯಾನ್ ಮತ್ತಿತರರು ಇದ್ದರು.
