ಬಂಟ್ವಾಳ; ಕಾನೂನಿಗಾಗಿ ಸ್ವಚ್ಛತೆಯಲ್ಲ, ಆರೋಗ್ಯಕ್ಕಾಗಿ ಸ್ವಚ್ಛತೆ, ಸ್ವಾಭಿಮಾನಕ್ಕಾಗಿ ಸ್ವಚ್ಛತೆ.. ಹೀಗೆ ಘೋಷಣಾ ಫಲಕಗಳನ್ನು ಹಿಡಿದುಕೊಂಡು ವಿದ್ಯಾರ್ಥಿಗಳು ಸಾಗುತ್ತಿದ್ದರೆ, ಮಹಿಳೆಯರು-ಪುರುಷರು ಗ್ರಾಮವನ್ನು ಸ್ವಚ್ಛಗೊಳಿಸುತ್ತಾ ಸಾಗಿದರು.. ಈ ಅಪರೂಪದ ದೃಧ್ಯಕಂಡು ಬಂದದ್ದು ನಾವೂರು ಗ್ರಾಮದಲ್ಲಿ.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆಶ್ರಯದಲ್ಲಿ ಸೋಮವಾರ ನಾವೂರು ಗ್ರಾಮಪಂಚಾಯತ್ ವ್ಯಾಪ್ತಿಯ ನಾವೂರು ಕೆನರಾ ಬ್ಯಾಂಕ್ ವೃತ್ತದಿಂದ ಮೈಂದಾಳ ವಿಷ್ಣುಮೂರ್ತಿ ದೇವಸ್ಥಾನದವರೆಗೆ ನಡೆದ ಸಮೂಹ ಜಾಗೃತಿ ಅಭಿಯಾನದಲ್ಲಿ ಯೋಜನೆಯ ಸ್ವಸಹಾಯ ಗುಂಪುಗಳು ನೂರಾರು ಸಂಖ್ಯೆ ಮಹಿಳೆಯರು, ಪುರುಷರು ಭಾಗವಹಿಸಿ,ರಸ್ತೆಯ ಇಕ್ಕೆಲಗಳ ಅಂಗಡಿ, ಬಸ್ ನಿಲ್ದಾಣ ಪರಿಸರವನ್ನು ಶುಚಿಗೊಳಿಸುವ ಮೂಲಕ ಸ್ವಚ್ಛತಾ ಸಂದೇಶ ಸಾರಿದರು.
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ , ಧ.ಗ್ರಾ.ಯೋಜನೆಯ ದಕ್ಷಿಣ ಕನ್ನಡ-ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿಯವರು ಮಾತನಾಡಿ, ಪ್ರತಿಯೊಬ್ಬರ ಮನ-ಮನೆಯಲ್ಲಿ ಸ್ವಚ್ಛತೆಯ ಅರಿವು ಮೂಡಿದಾಗ ಮಾತ್ರ ನಮ್ಮ ಗ್ರಾಮ-ನಗರ-ರಾಜ್ಯ, ದೇಶ ಸ್ವಚ್ಛತೆಯಿಂದಿರಲು ಸಾಧ್ಯ , ಈ ನಿಟ್ಟಿನಲ್ಲಿ ಗ್ರಾಮಸ್ಥರ ಭಾಗವಹಿಸುವಿಕೆಯೊಂದಿಗೆ ನಡೆಯುವ ಇಂತಹಾ ಅಭಿಯಾನಗಳು ಸ್ವಚ್ಛಭಾರತಕ್ಕೆ ಮುನ್ನುಡಿ ಬರೆಯುತ್ತದೆ ಎಂದರು.
ಮಲೇರಿಯಾ ನಿಯಂತ್ರಣಾಧಿಕಾರಿ ಜಯರಾಮ ಪೂಜಾರಿಯವರು ಮಾತನಾಡಿ, ಸ್ವಹಿತದ ಜೊತೆಯಲ್ಲಿ ಸಮಾಜದ ಹಿತವನ್ನು ಬಯಸುವ ಮನಸ್ಸು ನನ್ನದಾಗಬೇಕು, ನಮ್ಮ ಮನೆಯ ಕಸ,ತ್ಯಾಜ್ಯಗಳನ್ನು ಮನೆಯಿಂದ ಹೊರ ಹಾಕಿದ ಮಾತ್ರಕ್ಕೆ ನಮ್ಮ ಮನೆ ಶುಚಿಯಾಗಿತ್ತದೆ ಎಂಬ ಭಾವನೆ ಇಟ್ಟುಕೊಳ್ಳಬೇಡಿ, ಸಮಾಜದ ಹಿತವನ್ನೂ ಗಮನದಲ್ಲಿ ಇಟ್ಟುಕೊಳ್ಳಿ, ಊರಿನಲ್ಲಿ ಕಸದ ರಾಶಿ ಅಥವಾ ತ್ಯಾಜ್ಯ ನೀರು ಹರಿಯುತ್ತಿದ್ದರೆ ಸಾಂಕ್ರಾಮಿಕ ರೋಗ ಪಸರಿಸುವ ಸಾಧ್ಯತೆ ಇದೆ ಎಂದವರು ಎಚ್ಚರಿಸಿದರು.
ತಾಲೂಕು ಪಂಚಾಯತ್ ಉಪಾಧ್ಯಕ್ಷೆ ವಿಲಾಸಿನಿ ಶಾಂತವೀರ ಪೂಜಾರಿ ಅಭಿಯಾನವನ್ನು ಉದ್ಘಾಟಿಸಿದರು. ಧ.ಗ್ರಾ.ಯೊಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಸುನಿತಾ ನಾೈಕ್, ನಾವೂರು ಗ್ರಾ.ಪಂ. ಅಧ್ಯಕ್ಷ ಬೇಬಿ ಸುವರ್ಣ, ಉಪಾಧ್ಯಕ್ಷೆ ಜ್ಯೋತಿ, ಸದಸ್ಯ ಸದಾನಂದ ನಾವೂರು, ಅಭಿವೃದ್ದಿ ಅಧಿಕಾರಿ ಅಬೂಬಕ್ಕರ್,ಪಂ.ಕಾರ್ಯದರ್ಶಿ ಶೇಖರ್, ಸಾವಯವ ಕೃಷಿ ಅಧಿಕಾರಿ ಪ್ರಿಯಾಂಕ ಮತ್ತಿತರರು ಉಪಸ್ಥಿತರಿದ್ದರು.



