ಬಂಟ್ವಾಳ : ದ್ವೇಷ, ಅಸೂಯೆ, ಮತ್ಸರ ಮೊದಲಾದ ಮನಸ್ಸಿನ ರೋಗಗಳಿಗೆ ಅಂತ್ಯ ಹಾಡಿ ಮನುಷ್ಯ ಮನಸ್ಸುಗಳ ನಡುವೆ ಪರಸ್ಪರ ಪ್ರೀತಿ-ಸ್ನೇಹ, ಸೌಹಾರ್ದತೆ ನೆಲೆ ನಿಲ್ಲಿಸಲು ಉರೂಸ್ನಂತಹ ಧಾರ್ಮಿಕ ಕಾರ್ಯಕ್ರಮಗಳು ಪೂರಕವಾಗಲಿ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹಾರೈಸಿದರು.
ಪಾಣೆಮಂಗಳೂರು ಸಮೀಪದ ನೂರುದ್ದೀನ್ ಜುಮಾ ಮಸೀದಿ ಸಮೀಪ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ಮೌಲವಿ (ನ.ಮ) ರವರ ದರ್ಗಾ ಶರೀಫ್ನ ವಾರ್ಷಿಕ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆಧ್ಯಾತ್ಮಿಕ ಪುರುಷರು ತೋರಿದ ಆದರ್ಶ ಬದುಕನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡಾಗ ಸಮಾಜದಲ್ಲಿ ಯಾವುದೇ ಕ್ಷೋಭೆ ಉಂಟಾಗಲು ಸಾಧ್ಯವಿಲ್ಲ ಎಂದರು.


ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಕಾರ್ಯಕ್ರಮ ಉದ್ಘಾಟಿಸಿದರು. ಕೇರಳ-ತಾನೂರಿನ ಸಯ್ಯಿದ್ ಫಕ್ರುದ್ದೀನ್ ಹಸನಿ ಖಾದಿರಿ ದಾರಿಮಿ ತಂಙಳ್ ದುವಾಶಿರ್ವಚನಗೈದರು. ನೂರುದ್ದೀನ್ ಮಸೀದಿ ಅಧ್ಯಕ್ಷ ಹಾಜಿ ಅಹ್ಮದ್ ಫಕೀರ್ ಅಧ್ಯಕ್ಷತೆ ವಹಿಸಿದ್ದರು.
ಅತ್ರಾಡಿ ಖಾಝಿ ಹಾಜಿ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್, ಹಾಜಿ ವಿ.ಎ. ಇಬ್ರಾಹಿಂ ಮುಸ್ಲಿಯಾರ್, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಬಂಟ್ವಾಳ ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಪುರಸಭಾ ನಾಮನಿರ್ದೇಶಿತ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು. ಮಸೀದಿ ಕಾರ್ಯದರ್ಶಿ ಅಬ್ದುಲ್ ಹಮೀದ್, ಮದ್ರಸ ಅಧ್ಯಾಪಕರುಗಳಾದ ಬಿ.ಕೆ. ಅಬೂಬಕ್ಕರ್ ಮುಸ್ಲಿಯಾರ್, ಅಬ್ದುಲ್ ಹಕೀಂ ಹಿಮಮಿ ಮತ್ತಿತರರು ಉಪಸ್ಥಿತರಿದ್ದರು.
ಮಸೀದಿ ಖತೀಬ್ ಅಬ್ದುಲ್ ಕರೀಂ ಫೈಝಿ ಕುಂತೂರು ಸ್ವಾಗತಿಸಿ, ಮದ್ರಸ ಮುಖ್ಯೋಪಾಧ್ಯಾಯ ಹಾಜಿ ಬಿ.ಕೆ. ಅಬ್ದುಲ್ ಅಝೀಝ್ ಮದನಿ ವಂದಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.
ಉರೂಸ್ ಪ್ರಯುಕ್ತ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸಜಿಪ ಕೇಂದ್ರ ಮಸೀದಿ ಖತೀಬ್ ಅಶ್ಫಾಕ್ ಫೈಝಿ, ಮಂಗಳೂರು ಕೇಂದ್ರ ಮಸೀದಿ ಖತೀಬ್ ಸ್ವದಖತುಲ್ಲಾ ಫೈಝಿ, ಕುಂತೂರು ಮಸೀದಿ ಖತೀಬ್ ರಫೀಕ್ ಬಾಖವಿ ಮಠ ಉಪನ್ಯಾಸಗೈದರು. ಪ್ರತೀ ದಿನ ರಾತ್ರಿ ಬಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ಕಾರ್ಯಕ್ರಮ ನಡೆಯಿತು.
