ನವದೆಹಲಿ(ಮಾ.20): ಲೋಕಸಭೆ ಸಮರಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬಿಜೆಪಿ ನಿನ್ನೆ ತನ್ನ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದೆ. ಅತಿರಥ ಮಹಾರಥರು ಅಖಾಡಕ್ಕಿಳಿದಿದ್ದು, ಯುದ್ಧಕ್ಕೆ ಸನ್ನದ್ಧರಾಗುತ್ತಿದ್ದಾರೆ. ಬಿಜೆಪಿ ಭೀಷ್ಮ ಅಡ್ವಾಣಿ ಗುಜರಾತ್’ನ ಗಾಂಧಿನಗರ ಕ್ಷೇತ್ರದಿಂದ ಹೋರಾಡಲಿದ್ದಾರೆ. ಇನ್ನು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿ ಹಾಗೂ ಗುಜರಾತ್’ನ ವಡೋದರಾದಿಂದ ಕಣಕ್ಕಿಳಿಯುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿಯಲ್ಲಿ 67 ಮಂದಿ ಘಟಾನುಘಟಿಗಳಿದ್ದಾರೆ. 10 ಮಹಿಳೆಯರಿಗೂ ಸ್ಥಾನ ನೀಡಲಾಗಿದೆ.
ಬಿಜೆಪಿಯ ಪ್ರಮುಖ ಅಭ್ಯರ್ಥಿಗಳು
ಗುಜರಾತ್ ರಾಜ್ಯದಲ್ಲಿ…
ಗಾಂಧಿನಗರ: ಲಾಲ್ ಕೃಷ್ಣ ಅಡ್ವಾಣಿ
ಪೋರಬಂದರ್: ವಿಠ್ಠಲ್ ಭಾಯಿ ರಾಡಿಯಾ
ವಡೋದರಾ: ನರೇಂದ್ರ ಮೋದಿ
ರಾಜಸ್ಥಾನ ರಾಜ್ಯದಲ್ಲಿ…
ಬಿಕನೇರ್: ಅರ್ಜುನ್ ಮೇಘವಾಲ್
ಬಿಕನೇರ್: ರಾಹುಲ್ ಕಾಸ್ವಾ
ಜೈಪುರ ಗ್ರಾಮೀಣ: ರಾಜ್ಯವರ್ಧನ್ ಸಿಂಗ್ ರಾಥೋರ್
ದಹೋದ್: ಜಸ್ವಂತ್ ಸಿಂಗ್
ಉತ್ತರಪ್ರದೇಶ ರಾಜ್ಯದಲ್ಲಿ…
ಮಥುರಾ: ಹೇಮಮಾಲಿನಿ
ಡೊಮರಿಯಾ ಗಂಜ್: ಜಗದಂಬಿಕಾ ಪಾಲ್
ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬುದು ಬಹು ಚರ್ಚೆಗೆ ಈಡಾಗಿತ್ತು.. ಈಗ ಗುಜರಾತ್’ನ ಗಾಂಧಿನಗರ ಅಖಾಡದಲ್ಲಿ ಅಡ್ವಾಣಿ ಹೋರಾಟ ನಿಶ್ಚಯವಾಗಿದೆ. ಇನ್ನು ಪೋರಬಂದರ್’ನಿಂದ ವಿಠ್ಠಲ್ ಭಾಯಿ ರಾಡಿಯಾ, ವಡೋದರಾದಿಂದ ನರೇಂದ್ರ ಮೋದಿ ಕಣಕ್ಕಿಳಿಯಲಿದ್ದಾರೆ. ರಾಜಸ್ಥಾನದ ಬಿಕನೇರ್ ನಿಂದ ಅರ್ಜುನ್ ಮೇಘವಾಲ್ ಹಾಗೂ ರಾಹುಲ್ ಕಾಸ್ವಾ, ಜೈಪುರ ಗ್ರಾಮೀಣ ಕ್ಷೇತ್ರದಿಂದ ಒಲಿಂಪಿಕ್ಸ್ ಕ್ರೀಡಾಳು ರಾಜ್ಯವರ್ಧನ್ ಸಿಂಗ್ ರಾಥೋರ್, ದಹೋದ್ನಿಂದ ಜಸ್ವಂತ್ ಸಿಂಗ್ ಹೋರಾಡಲಿದ್ದಾರೆ.. ಇನ್ನು, ಉತ್ತರಪ್ರದೇಶದ ಮಥುರಾ ಕ್ಷೇತ್ರದಿಂದ ಡ್ರೀಮ್ ಗರ್ಲ್ ಹೇಮಮಾಲಿನಿ, ಕಾಂಗ್ರೆಸ್ನಿಂದ ಬಿಜೆಪಿ ಪಾಳಯಕ್ಕೆ ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದ ಜಗದಂಬಿಕಾ ಪಾಲ್, ಡೊಮರಿಯಾ ಗಂಜ್ನಿಂದ ಸ್ಫರ್ಧಿಸಲಿದ್ದಾರೆ. ಇನ್ನು ರಾಜಸ್ಥಾನ ಸಿಎಂ ವಸುಂಧರಾ ರಾಜೇ ಪುತ್ರ ದುಶ್ಯಂತ ಸಿಂಗ್ ಜಲ್ವಾರ್ ನಿಂದ ಸ್ಪರ್ಧಿಸಲಿದ್ದಾರೆ.
ಈ ಮಧ್ಯೆ, ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಬಿಜೆಪಿ ಪಟ್ಟಿಗೆ ವಿರೋಧ ವ್ಯಕ್ತಪಡಿಸಿದ್ದು, ತಾವು ಮಧ್ಯಪ್ರದೇಶದ ಭೋಪಾಲ್’ನಿಂದ ಸ್ಪರ್ಧಿಸಲು ಉತ್ಸಾಹಕರಾಗಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಹಾಗೂ ನಿತಿನ್ ಗಡ್ಕರಿ ನಿನ್ನೆ ರಾತ್ರಿ ಅಡ್ವಾಣಿ ಮನೆಗೆ ಭೇಟಿ ನೀಡಿ ಪಕ್ಷದ ನಿರ್ಧಾರ ಸ್ವೀಕರಿಸಿ ಗುಜರಾತ್’ನಿಂದಲೇ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ.
