ಕೈಕಂಬ: ಗುರುಪುರ ಕೈಕಂಬ ಸಮೀಪದ ಕಾಜಿಲ ಎಂಬಲ್ಲಿ ಹುಚ್ಚು ನಾಯಿಗಳ ಅವಾಂತರ ಹೆಚ್ಚಿದ್ದು ಹಲವರಿಗೆ ಕಚ್ಚಿ ಗಾಯಗೊಳಿಸಿದೆ. ಈ ಪೈಕಿ ಹುಚ್ಚುನಾಯಿ ಹಸುವೊಂದಕ್ಕೆ ಕಚ್ಚಿದ ಪರಿಣಾಮ ಅದಕ್ಕೂ ರೇಬಿಸ್ ತಗುಲಿದ್ದು, ಚಿಂತಾಜನಕ ಸ್ಥಿತಿಯಲ್ಲಿದೆ.

ಇತ್ತೀಚೆಗೆ ಕಾಜಿಲದಲ್ಲಿ ಬೀದಿನಾಯಿಗಳ ಅವಾಂತರ ಮಿತಿಮೀರಿದೆ. ಕೆಲ ದಿನಗಳ ಹಿಂದೆ ರೇಬಿಸ್ ರೋಗದಿಂದ ಬಳಲುತ್ತಿದ್ದ ಹುಚ್ಚುನಾಯಿಯೊಂದು ಆರ್ಭಟಿಸುತ್ತಾ ಬಂದು ಹಲವರಿಗೆ ಕಚ್ಚಿ ಗಾಯಗೊಳಿಸಿದೆ. ಈ ನಡುವೆ ಹುಚ್ಚುನಾಯಿ ಕಾಜಿಲದ ಸಾಕುಪ್ರಾಣಿಗಳಿಗೂ ಕಚ್ಚಿದೆ ಎನ್ನಲಾಗಿದ್ದು ಜನರು ಆತಂಕದಿಂದ ದಿನಕಳೆಯುತ್ತಿದ್ದಾರೆ.
ಈ ಪೈಕಿ ದನವೊಂದಕ್ಕೆ ಹುಚ್ಚುನಾಯಕಿ ಕಡಿದ ಪರಿಣಾಮ ಅದಕ್ಕೆ ರೇಬಿಸ್ ತಗುಲಿದ್ದು, ವಿಚಿತ್ರವಾಗಿ ವರ್ತಿಸುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಈ ಬಗ್ಗೆ ಗಂಜಿಮಠದ ಪಶುವೈದ್ಯಾಧಿಕಾರಿಗಳಿಗೆ ತಿಳಿಸಿದ್ದು ಅವರು ಪರಿಶೀಲನೆ ನಡೆಸಿ ಹೋಗಿದ್ದಾರೆ. ಈ ದನಕ್ಕೆ ರೇಬಿಸ್ ಮಿತಿಮೀರಿದ ಪರಿಣಾಮ ಅದು ಬದುಕುವ ಸಾಧ್ಯತೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಆತಂಕದಲ್ಲಿ ಜನತೆ: ಹುಚ್ಚುನಾಯಿ ಕಡಿತದಿಂದ ಊರವರು ಆತಂಕದಿಂದ ದಿನ ಕಳೆಯುತ್ತಿದ್ದಾರೆ. ಕಳೆದ ವಾರ ಹುಚ್ಚು ಹಿಡಿದ ಒಂದು ದನವನ್ನು ಊರವರೇ ಸೇರಿಕೊಂಡು ಸಂಹಾರ ಮಾಡಿದ್ದಾರೆ. ಇನ್ನು ಹಲವು ಪ್ರಾಣಿಗಳಿಗೆ ನಾಯಿ ಕಡಿದಿರುವ ಸಾಧ್ಯತೆ ಇದ್ದು ಇದು ಜನರ ಆತಂಕಕ್ಕೆ ಕಾರಣವಾಗಿದೆ.
ತ್ಯಾಜ್ಯಕ್ಕೆ ಬಲಿಯಾಗುತ್ತಿದೆ ಕಾಜಿಲ:
ಕಾಜಿಲದಲ್ಲಿ ಬೀದಿನಾಯಿಗಳ ಪ್ರಮಾಣ ಇಷ್ಟು ಪ್ರಮಾನದಲ್ಲಿ ಏರಲು ಅಲ್ಲಿ ತ್ಯಾಜ್ಯ ಎಸೆದಿರುವುದೇ ಕಾರಣ ಎಂದು ಗ್ರಮಸ್ಥರು ಆರೋಪಿಸುತ್ತಿದ್ದಾರೆ. ಗುರುಪುರ ಕೈಕಂಬದ ಕೋಳಿ ಅಂಗಡಿಯವರು ಕೋಳಿಯ ತ್ಯಾಜ್ಯವನ್ನು ಗೋಣಿಯಲ್ಲಿ ಕಟ್ಟಿಕೊಂಡು ಕಾಜಿಲದ ಗುಡ್ಡಕ್ಕೆ ಎಸೆದು ಹೋಗುತ್ತಿದ್ದು, ಇದನ್ನು ತಿನ್ನಲೆಂದು ಬೀದಿನಾಯಿಗಳು ಬರುತ್ತವೆ. ಇದರಿಂದಾಗಿ ಇಂದು ರೇಬಿಸ್ ರೋಗ ಬರುವಂತಾಗಿದೆ ಎಂದು ಆರೋಪಿಸಲಾಗಿದೆ.
