ಬಜಪೆ: ಗ್ರಾಮೀಣ ಪ್ರದೇಶಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವುದು ಸರಕಾರ ಜನಪ್ರತಿನಿಗಳು ಹಾಗೂ ಸ್ಥಳೀಯಾಡಳಿತದ ಪ್ರಮುಖ ಕರ್ತವ್ಯ. ಹನ್ನೆರಡು ವರುಷಗಳಿಂದ ಪ್ರಸ್ತಾವಿತ ಯೋಜನೆ ನೆನೆಗುದಿಯಲ್ಲಿತ್ತು. ಇದೀಗ 80 ಲಕ್ಷ ರೂ. ನಬಾರ್ಡ್ ಅನುದಾನದಿಂದ ಮಹತ್ವದ ಸಂಪರ್ಕ ರಸ್ತೆ ಯೋಜನೆ ಸಾಕಾರಗೊಂಡಿದ್ದು ರಸ್ತೆಯ ಮುಂದುವರಿದ ಭಾಗದ ಕಾಮಗಾರಿಗೆ ಶೀಘ್ರ ಮಂಜೂರತಿಗೆ ವ್ಯವಸ್ಥೆಗೊಳಿಸಲಾಗುವುದು ಎಂದು ರಾಜ್ಯ ಯುವಜನ, ಮೀನುಗಾರಿಕೆ, ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.


ಅವರು ಶನಿವಾರ ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲೇವು – ಮೊೈಲಿಬೆನ್ನಿ ನಬಾರ್ಡ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಬಾ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಗ್ರಾ.ಪಂ. ವ್ಯಾಪ್ತಿಯ 40 ಮಂದಿ ಫಲಾನುಭವಿ ಮಹಿಳೆಯರಿಗೆ ಹಕ್ಕು ಪತ್ರಗಳನ್ನು ಸಚಿವರು ವಿತರಿಸಿದರು. ಕಳೆದ 25 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಾರಿಜಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಎಕ್ಕಾರು ಕೃಷ್ಣ ಮಠದ ವೇದ ಮೂರ್ತಿ ಹರಿದಾಸ ಉಡುಪ, ಪೆರ್ಮುದೆ ಚರ್ಚ್ನ ರೆ|ಫಾ| ವಲೇರಿಯನ್ ರೊಡ್ರಿಗಸ್, ತೆಂಕ ಎಕ್ಕಾರು ಮಸೀದಿಯ ಹಬೀಬುಕ್ ರಹಮಾನ್ ಅವರು ಶುಭಾಶಂಸನೆಗೈದರು.
ಜಿ.ಪಂ. ಸದಸ್ಯ ಈಶ್ವರ ಕಟೀಲ್, ತಾ. ಪಂ. ಸದಸ್ಯ ರಮೇಶ್ ಶೆಟ್ಟಿ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮಂಗಳೂರು ಎಪಿಎಂಸಿ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಶ್ರೀ ಕೊಡಮಣಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರ ನಿತಿನ್ ಹಗ್ಡೆ ಕಾವರಮನೆ, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ್, ಎಂಜಿನಿಯರ್ ರಾಜೇಶ್ ರೈ. ಗ್ರಾ. ಪಂ. ಉಪಾಧ್ಯಕ್ಷೆ ವಿಶಾಲಾಕ್ಷಿ ಶೆಟ್ಟಿ, ಗ್ರಾ. ಪಂ. ಸದಸ್ಯರು, ಸ್ಥಳೀಯ ಪ್ರಮುಖರುಗಳು, ಗ್ರಾ. ಪಂ. ಕಾರ್ಯದರ್ಶಿ ಅಶೋಕ್ ಉಪಸ್ಥಿತರಿದ್ದರು.
ಗ್ರಾ. ಪಂ. ಪಿ.ಡಿ.ಓ ದೀಪಿಕಾ ಎ. ಸ್ವಾಗತಿಸಿ, ಹಕ್ಕು ಪತ್ರ ಫಲಾನುಭವಿಗಳ ವಿವರ ನೀಡಿದರು. ರಘು ಕೆ. ಕಾರ್ಯಕ್ರಮ ನಿರೂಪಿಸಿದರು.

