ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕಾಣೆಯಾಗಿದ್ದಾರೆ. ಅವರನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಉದ್ಯಮಿಯೊಬ್ಬರು ಹೇಳಿದ್ದಾರೆ.
ಲೋಕಸಭಾ ಚುನಾವಣೆ, ಜಮ್ಮುಮತ್ತು ಕಾಶ್ಮೀರ, ದೆಹಲಿ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕೂಗು ಜೋರಾಗಿ ಕೇಳುತ್ತಿದ್ದು, ಇದೀಗ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ಸೋಲಿಗಾಗಿ ಆತ್ಮಾವಲೋಕನ ನಡೆಸಲು ಎರಡು ವಾರಗಳ ರಜೆಯಲ್ಲಿ ಹೋಗಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಲವು ಗೊಂದಲಗಳಿಗೆ ಎಡೆಮಾಡಿದೆ.

ಇತ್ತ ಅಹ್ಮದಾಬಾದ್ನ ಕಾಂಗ್ರೆಸ್ ಕಾರ್ಯಕರ್ತರೆಂದು ಹೇಳಿಕೊಂಡಿರುವ ಉದ್ಯಮಿಯೊಬ್ಬರು, “ರಾಹುಲ್ ಗಾಂಧಿ ಅವರನ್ನು ಹುಡುಕಿಕೊಟ್ಟವರಿಗೆ ಆಕರ್ಷಕ ನಗದು ಬಹುಮಾನ ಕೊಡಲಾಗುವುದು’ ಎಂದು ಘೋಷಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಪಡೆಯಲು ಹವಣಿಸುತ್ತಿರುವ ಅಹ್ಮದಾಬಾದ್ನ ಉದ್ಯಮಿ ಅಮರ್ ವೈಶ್ಯ ಅಲಿಯಾಸ್ ಮುನ್ನಾ ಭೈಯ್ಯಾ ಅವರು ನೆಹರೂ ಗಾಂಧಿ ಕುಟುಂಬದ ಪೂರ್ವಜರ ಮನೆಯಾಗಿರುವ ಆನಂದ ಭವನದ ಸಮೀಪ ಒಂದು ದೊಡ್ಡ ಬ್ಯಾನರ್ ಹಾಕಿಸಿದ್ದು, ಬ್ಯಾನರ್ ನಲ್ಲಿ “ರಾಹುಲ್ ಗಾಂಧಿ ಕಳೆದು ಹೋಗಿದ್ದಾರೆ – ಹುಡುಕಿಕೊಟ್ಟವರಿಗೆ ಭರ್ಜರಿ ಬಹುಮಾನ ನೀಡಲಾಗುತ್ತದೆ’ ಎಂಬ ಘೋಷಣೆ ಬರೆಸಿದ್ದಾರೆ.
“ರಾಹುಲ್ ಗಾಂಧಿ ಒಬ್ಬ ಪಲಾಯನವಾದಿ. ಅವರು ತಮ್ಮ ಸಹವರ್ತಿಗಳನ್ನು, ಹಿಂಬಾಲಕರನ್ನು ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ. ರಣಾಂಗಣದಿಂದ ರಾಹುಲ್ ಓಡಿ ಹೋಗಿದ್ದು, ಆದ್ದರಿಂದಲೇ ನಾನು ಅವರನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದೇನೆ’ ಎಂದು ವೈಶ್ಯ ಹೇಳುತ್ತಾರೆ.
