ಮೂಡುಬಿದಿರೆ: ಸಮೀಪದ ಪೇಪರ್ಮಿಲ್ ಬಳಿ ಬುಧವಾರ ರಾತ್ರಿ ಬೈಕ್ ರಸ್ತೆಗೆ ಮಗುಚಿ ಬಿದ್ದು ಸ್ಥಳಿಯ ನಿವಾಸಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು ಶ್ರೀನಿವಾಸ ಕಾಮತ್(34)ಎಂದು ಗುರುತಿಸಲಾಗಿದ್ದು ಅವಿವಾಹಿತರೆನ್ನಲಾಗಿದೆ. ಮೂಡುಬಿದಿರೆ ಹಾಗೂ ಜಿಲ್ಲೆಯ ಇತರ ಕಡೆ ಮೆಡಿಕಲ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಬುಧವಾರ ರಾತ್ರಿ ಕೆಲಸ ಮುಗಿಸಿ ತನ್ನ ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಪೇಪರ್ ಮಿಲ್ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಬೈಕ್ ಗುದ್ದಿ ನಂತರ ರಸ್ತೆಗೆ ಮಗುಚಿ ಬಿತ್ತೆನ್ನಲಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಶ್ರೀನಿವಾಸ ಅವರಿಗೆ ತಲೆಗೆ ತೀವ್ರ ಏಟು ಬಿದ್ದು ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


