ಸುದ್ದಿ9 ಬಂಟ್ವಾಳ : 2012-13 ನೇ ಸಾಲಿನಲ್ಲಿ ಭೂ ಲಭ್ಯತಾ ಪಟ್ಟಿಗೆ ಸೇರಿಸಿರುವ ಜಮೀನನ್ನು ತೆರವು ಗೊಳಿಸಲು ಹಿಂದೇಟು ಹಾಕಿರುವ ಕಂದಾಯ ಇಲಾಖೆಯ ವಿರುದ್ದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ (ರಿ.) ನೇತೃತ್ವದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರವು ಸೋಮವಾರ ಬಿ.ಸಿ.ರೋಡಿನ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ನಡೆಯಿತು. ಬೆಳಗ್ಗಿನಿಂದಲೇ ತಾಲೂಕು ಕಛೇರಿ ಮುಂದೆ ಪ್ರತಿಭಟನೆ ಕುಳಿತ ಪ್ರತಿಭಟನಾ ಕಾರರು ಕಂದಾಯ ಇಲಾಖಾ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿದರು. ಬಂಟ್ವಾಳ ತಾಲೂಕು ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಪ.ಜಾ, ಪ.ಪಂ, ಹಿಂ.ವರ್ಗ ಹಾಗೂ ನಿವೃತ್ತ ಸೈನಿಕರಿಗೆ ಭೂ ಲಭ್ಯತಾ ಪಟ್ಟಿಯಲ್ಲಿ ಜಮೀನು ಸೇರಿಸಲಾಗಿದೆ. ಇದರಲ್ಲಿ ಹಲವಾರಿ ಗ್ರಾಮಗಳ ಸರ್ವೆ ನಂಬರ್ ನ ಜಮೀನು ಅತಿಕ್ರಮಣ ವಾಗಿದೆ. ಈ ಬಗ್ಗೆ ನಿವೃತ್ತ ಸೈನಿಕರು ಹಾಗೂ ದಲಿತ ರು ಅತಿಕ್ರಮಣ ತೆರವುಗೊಳಿಸುವಂತೆ ಇಲಾಖೆಗೆ ಮನವಿ ಮಾಡಿದ್ದರೂ, ಇಲಾಖೆ ಮೌನವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಇಲಾಖೆಯ ಈ ನೀತಿಯಿಂದಾಗಿ ದುರ್ಬಲ ವರ್ಗದವರಿಗೆ ಹಾಗೂ ದೇಶಸೇವೆ ಗೈದ ನಿವೃತ್ತ ಸೈನಿಕರಿಗೂ ಅನ್ಯಾಯವಾಗಿದೆ, ಇದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಕಾರಣ ಎಂದು ಪ್ರತಿಭಟನಾ ಕಾರರು ಟೀಕಿಸಿದರು.
ನಿವೃತ್ತ ಸೈನಿಕ ಉದಯ್ ಕುಮಾರ್ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು,ಡಿಕೆ ಡಿಸ್ಟ್ರಿಕ್ ಅಂಬೇಡ್ಕರ್ ಫೋರಂ ಫಾರ್ ಸೋಶಿಯಲ್ ಜಸ್ಟೀಸ್ ನ ಅಧ್ಯಕ್ಷ ಭಾನುಚಂದ್ರ ಕೃಷ್ಣಾಪುರ, ಸಿಪಿಐ(ಎಂ) ಮುಖಂಡ ರಾಮಣ್ಣ ವಿಟ್ಲ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಎ, ಕಾರ್ಯದರ್ಶಿ ಉಮೇಶ್, ತಾಲೂಕು ಅಧ್ಯಕ್ಷ ದಿನೇಶ್ ಪುಣಚ, ಬಂಟ್ವಾಳ ತಾಲೂಕು ನಲಿಕೆ ಸಂಘದ ಅಧ್ಯಕ್ಷ ರಾಮಣ್ಣ ವಿಟ್ಲ, ನಲಿಕೆ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಕೇಶವ ಕಬಕ ಮೊದಲಾದವರು ಪ್ರತಿಭಟನಾ ಕಾರರನ್ನುದ್ದೇಶಿಸಿ ಮಾತನಾಡಿದರು.


