ಉಡುಪಿ: ಎರಡು ಬಾರಿ ಭೂಮಿ ಬಿರುಕು ಬಿಟ್ಟು ತಲ್ಲಣಕ್ಕೆ ಒಳಗಾಗಿದ್ದ ಮಣಿಪಾಲ ರಾಜೀವ್ ನಗರದ ಜನರು ಮಂಗಳವಾರ ಮತ್ತೊಮ್ಮೆ ಭಯಭೀತರಾದರು.

ಮಧ್ಯಾಹ್ನ 1.30ರ ಹೊತ್ತಿಗೆ ಒಮ್ಮೆಗೇ ದೊಡ್ಡದೊಂದು ಸ್ಪೋಟದ ಸದ್ದು ಕೇಳಿದ್ದು, ಮನೆ ಕಿಟಕಿ, ಸಾಮಾನುಗಳು ಕಂಪಿಸಿವೆ. ಮೇಲಿರಿಸಿದ ಸಣ್ಣ ಬಾಟಲುಗಳು, ಪಾತ್ರೆಗಳು ಕೆಳಗೆ ಬಿದ್ದಿವೆ. ಇದರಿಂದ 80 ಬಡಗುಬೆಟ್ಟು ಗ್ರಾಮದ ಮಂಚಿಕೆರೆ ಸುತ್ತಮುತ್ತಲಿನ ರಾಜೀವ ನಗರ, ಶಾಂತಿನಗರ, ರಾಹುಲ್ನಗರದ ಜನ ಮನೆ ಬಿಟ್ಟು ಹೊರ ಬಂದಿದ್ದಾರೆ. ಆಗ ಮತ್ತೊಮ್ಮೆ ಸದ್ದು!
ಜನ ಭೀತರಾಗಿ ಹೊರಬಂದು ನೋಡಿದರೆ ಅದು ನಿಜವಾದ ಸ್ಪೋಟವಲ್ಲ, ಪ್ರಗತಿ ನಗರದಲ್ಲಿ ಪೊಲೀಸ್ ಇಲಾಖೆಯ ಬಾಂಬ್ ಪತ್ತೆದಳ ನಡೆಸಿದ ಅಣಕು ಪ್ರದರ್ಶನ ಎಂದು ತಿಳಿದು ನಿರಾಳರಾದರು.
ಆದರೆ, ಸ್ಫೋಟದಿಂದ ಈ ಹಿಂದೆ ಕಾಣಿಸಿಕೊಂಡಿದ್ದ ಬಿರುಕು ದೊಡ್ಡದಾಗಿದ್ದರಿಂದ ಜನರ ಆತಂಕ ಕಡಿಮೆಯಾಗಿರಲಿಲ್ಲ. ಸ್ಥಳೀಯ ಗ್ರಾಮ ಕರಣಿಕ ದಿವಾಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೆ, ಗ್ರಾಪಂ ಉಪಾಧ್ಯಕ್ಷ ವಿಠಲ ಅಮೀನ್, ಸದಸ್ಯ ಶಾಂತರಾಮ ಶೆಟ್ಟಿ ಜನರನ್ನು ಸಮಾಧಾನಪಡಿಸಿದ್ದಾರೆ.
ಸುಮಾರು 500ಕ್ಕೂ ಅಧಿಕ ಮನೆಗಳಿಗೆ ಕಂಪನ ಅನುಭವಕ್ಕೆ ಬಂದಿದ್ದು, ಹೆಚ್ಚಿನ ಮನೆಗಳಲ್ಲಿ ಒಬ್ಬರು, ಇಬ್ಬರು ಬಿಟ್ಟು ಮತ್ತೆಲ್ಲರೂ ಕೆಲಸಕ್ಕೆ ಹೋಗಿದ್ದರು. ಕೆಲವರು ಘಟನೆ ತಿಳಿದು ಮನೆಗೆ ಓಡಿಬಂದರು. ಕಳೆದ ಬಾರಿ ಬಿರುಕು ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳುವುದೇ ಕಷ್ಟ ಎಂಬ ಪರಿಸ್ಥಿತಿಯಲ್ಲಿದ್ದ ಜಗದೀಶ್ ಕೆಲಸಕ್ಕೆ ಹೋಗಿದ್ದು, ಅವರಿಗೆ ಭೂಮಿ ಅದುರಿದ ಮತ್ತು ಮನೆಯ ಬಾವಿಯ ಬಿರುಕು ದೊಡ್ಡದಾಗಿರುವ ಸುದ್ದಿ ಕೇಳಿ ಓಡಿ ಬಂದಿದ್ದಾರೆ. ಹೀಗೆ ಸುತ್ತಮುತ್ತಲಿನ ಎಲ್ಲ ಮನೆಗಳವರನ್ನು ಈ ಘಟನೆ ಆತಂಕಕ್ಕೆ ದೂಡಿದೆ.
