ಉಡುಪಿ: ಕ್ರಿಕೆಟ್ ಆಟದಲ್ಲಿ ಉಂಟಾದ ಮನಸ್ತಾಪ ಕೊಲೆಯಲ್ಲಿ ಪರ್ಯಾವಸಾನಗೊಂಡ ಆತಂಕಕಾರಿ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಕೋಟಾದ ಉಪ್ಲಾಡಿ ಎಂಬಲ್ಲಿ ನಡೆದಿದೆ. ಸುಘೋಷ ಅಡಿಗ(10) ಎಂಬ ಬಾಲಕ ಕೊಲೆಗೀಡಾಗಿರುವಾತ. ಆತನ ನೆರೆಮನೆಯ ಸ್ನೇಹಿತ ಹತ್ತನೇ ತರಗತಿಯ ಹುಡುಗನೇ ಈ ಕೊಲೆ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಶನಿವಾರ ರಾತ್ರಿಯಿಂದ ಈ ಇಬ್ಬರೂ ಬಾಲಕರು ನಾಪತ್ತೆಯಾಗಿದ್ದರು. ನಿನ್ನೆ ತಡ ರಾತ್ರಿ ಸುಘೋಷ ಅಡಿಗ ಎಂಬ ಬಾಲಕನ ಶವ ಪತ್ತೆಯಾಗಿದ್ದು, ಈ ಇಬ್ಬರು ಬಾಲಕರು ಕ್ರಿಕೆಟ್ ಆಟವಾಡಿ ಅದಾವುದೋ ಕಾರಣಕ್ಕೆ ಜಗಳವಾಡಿ ಕೊಲೆಯಲ್ಲಿ ದುರಂತ ಅಂತ್ಯ ಕಂಡಿದೆ ಎನ್ನಲಾಗಿದೆ.
ಹಂತಕ ಬಾಲಕ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯಾಗಿದ್ದು, ಈ ಹಿಂದೆ ಬೆಂಗಳೂರಿನಲ್ಲಿ ವಾಸವಾಗಿದ್ದ. ಬಳಿಕ ಈತ ಉಪ್ಲಾಡಿಯಲ್ಲಿರುವ ತನ್ನ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದ. ಈತನ ವಿರುದ್ಧ ಸ್ಥಳೀಯರು ಹಲವು ಆರೋಪಗಳನ್ನು ಮಾಡುತ್ತಿದ್ದರು. ಈತನನ್ನು ಪೊಲೀಸರು ಕೋಟ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ಶನಿವಾರ ಸಂಜೆ ಈತ ಸುಘೋಷನನ್ನು ಕ್ರಿಕೆಟ್ ಆಟವಾಡಲೆಂದು ಕರೆದೊಯ್ದಿದ್ದ. ಬಳಿಕ ಸುಘೋಷ ನಾಪತ್ತೆಯಾಗಿದ್ದ. ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಂತೆಯೇ ಹಂತಕ ಬಾಲಕ ಕೂಡಾ ನಾಪತ್ತೆಯಾಗಿದ್ದ.
ಸುಘೋಷನ ತಂದೆ ವಿಘ್ನೇಶ್ವರ ಅಡಿಗ ಐದು ತಿಂಗಳ ಹಿಂದೆ ಹೃದಯಾಘಾತದಿಂದ ನಿಧನ ಹೊಂದಿದ್ದರು. ತಾಯಿ ರೇವತಿ ಕೂಡಾ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರಿಬ್ಬರ ಇನ್ನೋರ್ವ ಪುತ್ತ ಮಹೇಶ್ ಅಡಿಗ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇದೀಗ ಸುಘೋಷನ ಮೃತ್ಯು ಈ ಕುಟುಂಬಕ್ಕೆ ಬರಸಿಡಿಲಿನಂತೆ ಬಂದೆರಗಿದೆ.

