ಸುದ್ದಿ9 ಮೂಡಬಿದರೆ: ನವೀಕೃತಗೊಂಡ ಹೊಸಬೆಟ್ಟು ಹೋಲಿ ಕ್ರಾಸ್ ಚರ್ಚ್ ಭಾನುವಾರ ಆಶೀರ್ವಚನ ಕಾರ್ಯಕ್ರಮ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ರೆ.ಫಾ.ಡಾ.ಅಲೋಸಿಯಸ್ ಪೌಲ್ ಡಿ’ಸೋಜ ವಿಶೇಷ ಪ್ರಾರ್ಥನೆ, ಆಶೀವರ್ಚನ ಹಾಗೂ ಬಲಿಪೂಜೆ ನೆರವೇರಿಸಿದರು.
ಭಾನುವಾರ ರಾತ್ರಿ ನಡೆದ ಧಾರ್ಮಿಕ ಸಭೆಯನ್ನು ಮಂಗಳೂರು ಬೆಥನಿ ಲಿಟ್ಲ್ ಫ್ಲವರ್ ಸಂಸ್ಥೆಯ ಸುಪೀರಿಯರ್ ಜನರಲ್ ರೆ.ಸಿಸ್ಟರ್ ವಿಲ್ಬೆರ್ಟಾ ಬಿ.ಎಸ್ ಉದ್ಘಾಟಿಸಿದರು. ವಕೀಲೆ ವಿಜೇತ ಪಿಂಕಿ ಲೋಬೋ ಹಾಗೂ ಸರ್ಕಾರಿ ನೌಕರಿಯಲ್ಲಿ ಉನ್ನತ ಹುದ್ದೆಯನ್ನು ಪಡೆದಿರುವ ವಿಶೂಲ್ ದೀಪ್ತಿ ಫೆರ್ನಾಂಡಿಸ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಮೂಡುಬಿದರೆ ವಲಯದ ಪ್ರಧಾನ ಧರ್ಮಗುರು ರೆ.ಫಾ.ಆಸ್ಟಿನ್ ಪೀಟರ್ ಪೇರಿಸ್ ಅಧ್ಯಕ್ಷತೆ ವಹಿಸಿ ಆಶೀವರ್ಚನ ನೀಡಿದರು. ಮೂಡುಬಿದರೆಯ ಕ್ರೈಸ್ತ ಸಮುದಾಯವನ್ನು ಸಂಘಟಿಸುವಲ್ಲಿ ಹೊಸಬೆಟ್ಟು ಚರ್ಚಿನ ಪಾತ್ರ ಮಹತ್ವದ್ದು. ಹಲವಾರು ವೈಶಿಷ್ಟ್ಯಗಳಿಂದ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡ ಈ ಚರ್ಚ್ ನಡೆದು ಬಂದ ಹಾದಿ ಇತರ ಚರ್ಚ್ಗಳಿಗೆ ಮಾದರಿ ಎಂದರು.
ಹೊಸಬೆಟ್ಟು ಚರ್ಚ್ನ ಧರ್ಮಗುರು ರೆ.ಫಾ. ಅಸಿಸ್ಸಿ ರೆಬೆಲ್ಲೋ ಆಶೀವರ್ಚನ ನೀಡಿದರು. ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಹೊಸಬೆಟ್ಟು ಚರ್ಚ್ಗೆ ರಾಜ್ಯ ಸರ್ಕಾರ 10 ಲಕ್ಷ ರೂ. ಅನುದಾನ ನೀಡಿದೆ. ಹೊಸಬೆಟ್ಟು ಗ್ರಾಮದ ಅಭಿವೃದ್ಧಿಗೂ ಅಧ್ಯತೆ ನೀಡಲಾಗುವುದು ಎಂದರು. ಸಂಸದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸಂಸದರ ನಿಧಿಯಿಂದ ಚರ್ಚ್ಗೆ 5 ಲಕ್ಷ ರೂ. ಅನುದಾನವನ್ನು ಒದಗಿಸಲು ಪ್ರಯತ್ನಿಸುವುದಾಗಿ ಭರವಸೆಯಿತ್ತರು. ತಾ.ಪಂ ಸದಸ್ಯ ಪ್ರಕಾಶ್, ಹೊಸಬೆಟ್ಟು ಗ್ರಾ.ಪಂ ಅಧ್ಯಕ್ಷೆ ರೀಟಾ ಕುಟಿನ್ಹಾ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಲಿಯೊ ವಾಲ್ಟರ್ ನಝರೆತ್, ಕಾರ್ಯದರ್ಶಿ ಉರ್ಬನ್ ಮಿನೇಜಸ್, ಸ್ವಾಗತ ಸಮಿತಿ ಅಧ್ಯಕ್ಷ ವಲೇರಿಯನ್ ಕುಟಿನ್ಹಾ, ವಿಲ್ಫ್ರೇಡ್ ಮೆಂಡೋನ್ಸಾ ಮೊದಲಾದವರು ಉಪಸ್ಥಿತರಿದ್ದರು.




