ಸುದ್ದಿ9 ಮೂಡುಬಿದರೆ: ನಿಡ್ಡೋಡಿಯಂತಹ ಪ್ರಕೃತಿ ಸೌಂದರ್ಯದ ಕೃಷಿ ಭೂಮಿಯನ್ನೊಳಗೊಂಡ ಪ್ರದೇಶದಲ್ಲಿ ಈಗ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಈ ಪ್ರದೇಶವನ್ನು ಬರಡಾಗಿಸುವ ಕೆಲಸವನ್ನು ರಾಜಕರಣಿಗಳು ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಯೋಜನೆಗಳನ್ನು ರೂಪಿಸಿ ಪರಿಸರಕ್ಕೆ ಹಾನಿಯುನ್ನುಂಟು ಮಾಡುವ, ನದಿಗಳಿಗೆ ಹಾನಿಯುಂಟು ಮಾಡುವ ಕೆಲಸವನ್ನು ರಾಜಕರಣಿಗಳು ಮಾಡಬೇಡಿ ಎಂದು ಉಡುಪಿ ಮಾನವ ಹಕ್ಕುಗಳ ಸಂರಕ್ಷಣಾ ಸಂಘಟನೆಯ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನುಭೋಗ್ ಹೇಳಿದರು.
ಶ್ರೀ ಧವಳ ಕಾಲೇಜಿನ ಮಾನವ ಹಕ್ಕುಗಳ ಸಂಘ ಮತ್ತು ಅರ್ಥಶಾಸ್ತ್ರ ಹಾಗೂ ಸಹಕಾರ ವಿಭಾಗದ ಆಶ್ರಯದಲ್ಲಿ ಧವಳ ಕಾಲೇಜಿನಲ್ಲಿ ಶುಕ್ರವಾರ ನಡೆದ ಯುಜಿಸಿ ಪ್ರಾಯೋಜಿತ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾನವ ಹಕ್ಕುಗಳು ಮತ್ತು ಪರಿಸರ : ಚಿಂತನೆಗಳು ಮತ್ತು ಕಳಕಳಿ ಎಂಬ ವಿಷಯದ ಕುರಿತು ದಿಕ್ಸೂಚಿ ಭಾಷಣ ಮಾಡಿದರು.
ಕರಾವಳಿಯ ಜೀವ ನದಿಯಾದ ನೇತ್ರಾವತಿಯನ್ನು ತಿರುಗಿಸುವ ಎತ್ತಿನ ಹೊಳೆ ಯೋಜನೆಯಿಂದ ಪರಿಸರಕ್ಕೆ ಉಂಟಾಗುವ ದುಷ್ಪಾರಿಣಾಮಗಳ ಕುರಿತು ಅಧ್ಯಯನ ನಡೆಸಿಲ್ಲ ಈ ಕುರಿತು ತಾನು ಸಮಗ್ರ ಅಧ್ಯಯನ ನಡೆಸಿ ವರದಿ ತಯಾರಿಸಿರುವುದಾಗಿ ಹೇಳಿದ ಅವರು ಜನಸಂಖ್ಯೆಯನ್ನು ನಿಯಂತ್ರಿಸಲು ಇನ್ನೂ ಪರಿಣಾಮಕಾರಿ ಕಾನೂನುಗಳು ಜಾರಿಗೆ ಬಂದಿಲ್ಲ ಆದರೆ ನಾಯಿಗಳನ್ನು ಕೊಲ್ಲಬಾರದೆಂದು ಕಾನೂನು ಜಾರಿಗೆ ಬಂದ ಪರಿಣಾಮವಾಗಿ ನಾಯಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ ದೇಶದಲ್ಲಿ ವರ್ಷಕ್ಕೆ 65 ಸಾವಿರ ಮಕ್ಕಳು ನಾಯಿ ಕಡಿತದಿಂದ ಸರಿಯದ ಚಿಕಿತ್ಸೆ ಇಲ್ಲದೆ ಸಾಯುತ್ತಿದ್ದಾರೆ ಹೇಳಿದರು.
ಒಂದು ಯೋಜನೆಯನ್ನು ಜಾರಿಗೆ ತರುವಾಗ ಅದರಿಂದ ಉಂಟಾಗುವ ದುಷ್ಪಾರಿಣಾಮಗಳನ್ನು ತಡೆಯುವ ಪರ್ಯಾಯ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಕಾನೂನುಗಳಿಲ್ಲ ರಾಜಕೀಯ ದೃಷ್ಠಿಕೋನಕ್ಕಿಂತ ಭಿನ್ನವಾಗಿ ಹೇಗೆ ಮಾನವ ಹಕ್ಕುಗಳನ್ನು ನೋಡಬಹುದು ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.
ಮೂಡಬಿಧರೆ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಸತೀಶ್ ಎಸ್.ಟಿ. ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ ಮಾನವ ಹಕ್ಕು, ಬದುಕುವ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಜನರಿಗೆ ಸ್ಪಂದಿಸುವ ರೀತಿಯ ಮಾನವ ಹಕ್ಕುಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬ ವಿಷಯಗಳ ಕುರಿತು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಡಿ.ಜೆ.ವಿ.ವಿ ಸಂಘದ ಅಧ್ಯಕ್ಷ ಎಂ. ವೀರೇಂದ್ರ ವಹಿಸಿದ್ದರು.
ಮಾನವ ಹಕ್ಕುಗಳ ಸಂಘಟನೆಯ ಆನಂದ ಶೆಟ್ಟಿ, ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಲ್ಫೋನ್ಸ್ ಡಿ’ಸೋಜಾ, ವಕೀಲರ ಸಂಘದ ಅಧ್ಯಕ್ಷ ಕೆ.ಆರ್ ಪಂಡಿತ್, ಕಾಲೇಜಿನ ಪ್ರಾಂಶುಪಾಲ ಪ್ರೊ.ರವೀಶ್ ಕುಮಾರ್, ಪ್ರಾಧ್ಯಾಪಕರಾದ ಎಂ. ವಾಸುದೇವ ಭಟ್, ಸುದರ್ಶನ, ಮಹಾವೀರ ಅಜ್ರಿ, ಸಂತೋಷ್ ಉಪಸ್ಥಿತರಿದ್ದರು.

