ಮಂಗಳೂರು: ವೀರೇಂದ್ರ ಶೆಟ್ಟಿ ಕಾವೂರು ಇವರ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಚಾಲಿಪೋಲಿಲು ತುಳು ಚಿತ್ರದ ಮುಹೂರ್ತ ಸಮಾರಂಭ ಪಾಂಡೇಶ್ವರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಬೆಳಿಗ್ಗೆ 8.30ಕ್ಕೆ ನೆರವೇರಿತು. ಈ ಚಿತ್ರವನ್ನು ಜಯಕಿರಣ ಫಿಲ್ಮ್ಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಿಸುತ್ತಿದ್ದಾರೆ. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಮನೋಹರ್ ಪ್ರಸಾದ್, ತುಳು ಚಿತ್ರಗಳ ಸುವರ್ಣ ಕಾಲ ಆರಂಭವಾಗಿದ್ದು ಮತ್ತಷ್ಟು ಒಳ್ಳೆಯ ತುಳು ಚಿತ್ರಗಳು ತೆರೆಗೆ ಬರಲಿ ಎಂದು ಆಶಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ತುಳು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸಿನಿಮಾಗಳು ಪೂರಕವಾಗಲಿ ಎಂದು ಹಾರೈಸಿದರು.
ಖ್ಯಾತ ವೈದ್ಯ ಡಾ. ಹಂಸರಾಜ್ ಆಳ್ವ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ಸಮಾರಂಭದಲ್ಲಿ ವಿ. ಮನೋಹರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹನಿರ್ದೇಶಕ ಚಂದ್ರಹಾಸ ರೈ, ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಸುಧಾಕರ ಬನ್ನಂಜೆ, ವಿಜಯ ಕುಮಾರ್ ಕೊಡಿಯಾಲ್ಬೈಲ್, ದೇವ್ದಾಸ್ ಕಾಪಿಕಾಡ್ ಮುಂತಾದವರು ಉಪಸ್ಥಿತರಿದ್ದರು. ಈ ಚಿತ್ರಕ್ಕೆ ಕನ್ನಡದ ಪ್ರಸಿದ್ಧ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಸಂಗೀತವಿದೆ. ಚಿತ್ರದ ತಾರಾಗಣದಲ್ಲಿ ದೇವ್ದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಬೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಸುರೇಂದ್ರ ಬಂಟ್ವಾಳ, ಸುಂದರ್ ರೈ ಮಂದಾರ, ಪದ್ಮಜಾ ರಾವ್ ಮುಂತಾದವರಿದ್ದಾರೆ. ಮದನ್ ಹರಿಣಿ ನೃತ್ಯ ಸಂಯೋಜನೆ ಮಾಡಿದ್ದರೆ, ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರದ್ದಾಗಿದೆ.




