ಮೂಡುಬಿದರೆ: ಪುತ್ತಿಗೆ ಗ್ರಾಮದ ಸಂಪಿಗೆಯ ಮನೆ ಹತ್ತಿರವಿದ್ದ ಶೇಂದಿ ಅಂಗಡಿಯನ್ನು ತೆರವುಗೊಳಿಸುವಂತೆ ಮಂಗಳೂರು ಸಹಾಯಕ ಆಯುಕ್ತರ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಸಂಪಿಗೆಯ ಮನೆ ಹಾಗೂ ಜನವಸತಿ ಪ್ರದೇಶಕ್ಕೆ ಹತ್ತಿರದಲ್ಲೆ ಶೇಂದಿ ಅಂಗಡಿಯಿರುವುದರಿಂದ ಸಮಸ್ಯೆಯಾಗಿದೆ ಇದನ್ನು ತೆರವುಗೊಳಿಸಬೇಕು ಎಂದು ರಾಮ ಎಂಬವರು ಮಂಗಳೂರಿನ ಸಹಾಯಕ ಆಯುಕ್ತರಿಗೆ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸಹಾಯಕ ಆಯುಕ್ತರು ಶೇಂದಿ ಅಂಗಡಿಯನ್ನು ಸ್ಥಳಾಂತರಿಸುವಂತೆ ಈಚೆಗೆ ಆದೇಶ ನೀಡಿದ್ದರು. ಶೇಂದಿ ಮಾರಾಟಗಾರ ದೇಜಪ್ಪ ಸುವರ್ಣ ಈ ಬಗ್ಗೆ ಮೂರ್ತೆದಾರರ ಸಂಘಕ್ಕೆ ದೂರು ನೀಡಿದರು. ಸಂಘವು ಎ.ಸಿ ಆದೇಶದ ವಿರುದ್ಧ ಹೈಕೋರ್ಟ್ ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ಎ.ಸಿ ಅವರ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
