ಇಸ್ಲಾಮಾಬಾದ್: ಮುಂಬೈ ದಾಳಿ ಪ್ರಕರಣದ ಆರೋಪಿ ಜಾಕಿಯುರ್ ರೆಹ್ಮಾನ್ ಲಖ್ವಿಯನ್ನ ಜೈಲಿನಲ್ಲೇ ಬಂಧಿಸಿಟ್ಟುಕೊಳ್ಳುವ ಪಾಕಿಸ್ತಾನದ ಪ್ರಯತ್ನ ಕೈಗೂಡುತ್ತಿಲ್ಲ. ಲಖ್ವಿಯನ್ನ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಇಲ್ಲಿಯ ಹೈಕೋರ್ಟ್ ಆದೇಶಿಸಿದೆ. ಲಖ್ವಿಗೆ ಜಾಮೀನು ಸಿಕ್ಕರೂ ಅವರನ್ನು ಜೈಲಿನಲ್ಲಿಟ್ಟಿರುವುದಕ್ಕೆ ಪಾಕ್ ಸರ್ಕಾರವನ್ನ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಸಾರ್ವಜನಿಕ ಹಿತಾಸಕ್ತಿ ಪಾಲನೆಯಡಿಯಲ್ಲಿ ಲಷ್ಕರೇ ತೈಯಬಾದ ಉಗ್ರಗಾಮಿ ಲಖ್ವಿಯನ್ನ 30 ದಿನಗಳ ಕಾಲ ಬಿಡುಗಡೆ ಮಾಡಲಾಗುವುದಿಲ್ಲವೆಂದು ಪಾಕಿಸ್ತಾನ ಸರ್ಕಾರ ಸೂಚನೆ ಹೊರಡಿಸಿತ್ತು. ಇದನ್ನ ಪ್ರಶ್ನಿಸಿ ಜಾಕಿಯುರ್ ರೆಹ್ಮಾನ್ ಲಖ್ವಿ ಇಸ್ಲಾಮಾಬಾದ್ ಹೈಕೋರ್ಟ್ ಮೊರೆ ಹೋಗಿದ್ದ. ಇದರ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ, ತನ್ನ ಮಧ್ಯಂತರ ಆದೇಶದಲ್ಲಿ ಸರ್ಕಾರದ ಸೂಚನೆಯನ್ನ ರದ್ದುಪಡಿಸಿ, ಲಖ್ವಿಯನ್ನು ಬಿಡುಗಡೆ ಮಾಡಬೇಕೆಂದು ತಿಳಿಸಿದೆ.
ಪೇಶಾವರದಲ್ಲಿ ಮಕ್ಕಳ ಮಾರಣಹೋಮವಾದ ಎರಡೇ ದಿನಗಳಲ್ಲಿ ಡಿಸೆಂಬರ್ 18ರಂದು ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ಲಖ್ವಿಗೆ ಜಾಮೀನು ನೀಡಿ ಆದೇಶ ಹೊರಡಿಸಿತ್ತು. ಇದು ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯವನ್ನ ಬೆಚ್ಚಿಬೀಳಿಸಿತ್ತು. ಪಾಕಿಸ್ತಾನ ಸರ್ಕಾರಕ್ಕೂ ಇರಿಸುಮುರುಸು ಮಾಡಿತ್ತು. ಅಂತಾರಾಷ್ಟ್ರೀಯ ರಾಷ್ಟ್ರಗಳ ಒತ್ತಡದಿಂದ ಪಾಕ್ ಸರ್ಕಾರ ಲಖ್ವಿಯನ್ನ ಜೈಲಿಂದ ಬಿಡುಗಡೆ ಮಾಡದಿರಲು ನಿರ್ಧರಿಸಿತ್ತು. ಈಗ ಹೈಕೋರ್ಟ್ ಆದೇಶ ಬಂದಿರುವುದರಿಂದ ಲಖ್ವಿಯನ್ನು ಬಿಡುಗಡೆ ಮಾಡದೇ ಬೇರೆ ದಾರಿ ಇಲ್ಲದಂತಾಗಿದೆ.

