ಕೈಕಂಬ: ಬಜ್ಪೆ ಠಾಣಾ ವ್ಯಾಪ್ತಿಯ ಕಾಜಿಲದ ಪಕ್ಯಾರ್ ಎಂಬಲ್ಲಿನ ಕಾಜಿಲದ ನೂಯಿಯಿಂದ ಮಳಲಿ ಮುಖಾಂತರ ಸಂಚರಿಸುವ ರಸ್ತೆಯಾಗಿ ಬಂಟ್ವಾಳ-ಬಿ.ಸಿ.ರೋಡ್, ಮೂಡಬಿದ್ರೆಗೆ ಸಂಪರ್ಕಿಸುವ ರಸ್ತೆಯಂಚಿನ ನೀರಿರುವ ಸ್ಥಳಕ್ಕೆ ಎರಡು ಗಬ್ಬದ ಹಸುಗಳು ಮಂಗಳವಾರ ಬೆಳಿಗ್ಗೆ ಪತ್ತೆಯಾಗಿವೆ. ಈ ದನಗಳನ್ನು ಅಕ್ರಮ ದನಸಾಗಾಟಗಾರರು ಹಸುಗಳು ಸತ್ತಿರುವ ಹಿನ್ನೆಲೆಯಲ್ಲಿ ಎಸೆದು ಪರಾರಿಯಾಗಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರ: ಕಾಜಿಲದ ಪಕ್ಯಾರ್ ಎಂಬಲ್ಲಿನ ರಸ್ತೆಯಂಚಿನ ನೀರಿರುವ ಪ್ರದೇಶದಲ್ಲಿ ಮೃತಹಸುವೊಂದು ಪತ್ತೆಯಾಗಿತ್ತು. ಇದನ್ನು ಸ್ಥಳೀಯರು ಗಮನಿಸಿದ ಸ್ಥಳೀಯರು ತಕ್ಷಣ ಬಜ್ಪೆ ಠಾಣೆಗೆ ಸುದ್ದಿಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪಶುವೈದ್ಯಾಧಿಕಾರಿಗಳಿಗೂ ಸುದ್ದಿಮುಟ್ಸಿಲಾಗಿತ್ತು. ಊರವರ ಸಹಕಾರದಿಂದ ದನವನ್ನು ನೀರಿನಿಂದ ಮೇಲಕೆತ್ತಿ ಪಶುವೈದ್ಯಾಧಿಕಾರಿಗಳು ಮಹಜರು ನಡೆಸಿದ್ದಾರೆ.
ಮತ್ತೊಂದು ದನ ಪತ್ತೆ: ಒಂದು ದನವನ್ನು ಮಹಜರು ನಡೆಸಿ ದಫನ ಕಾರ್ಯ ನಡೆಸಬೇಕೆನ್ನುವಷ್ಟರಲ್ಲಿ ಇನ್ನೊಂದು ದನ ಪತ್ತೆಯಾಗಿದೆ. ಇದನ್ನು ಬಡಿಗೆಯ ಮುಖಾಂತರ ಸುದ್ದಿ ಎತ್ತಿಕೊಂಡು ಶವಮಹಜರು ನಡೆಸಿ ಮೊದಲಿನ ದನವಿದ್ದ ಪ್ರದೇಶದಲ್ಲಿಯೇ ದಫನ ನಡೆಸಲಾಗಿದೆ. ಹಿಂದೂ ಸಂಸ್ಕಾರದಂತೆ ದನಕ್ಕೆ ಅಂತಿಮ ವಿಧಿ ಸಲ್ಲಿಸಲಾಗಿದೆ.
ಅಕ್ರಮ ದನ ಸಾಗಾಟಕಾರರು ಎಸೆದಿರುವ ಶಂಕೆ:
ಈ ರಸ್ತೆ ಪೊಳಲಿ, ಕೈಕಂಬ ಪ್ರದೇಶದಿಂದ ಮಳಲಿ ಮುಖಾಂತರ ಸಂಚರಿಸಿ ಅಲ್ಲಿಂದ ಸಿದ್ದಕಟ್ಟೆ, ಬಿ.ಸಿ.ರೋಡ್, ಮೂಡಬಿದ್ರೆ ಬಂಟ್ವಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು,ಅಕ್ರಮ ದನಸಾಗಾಟಕಾರರು ಇದನ್ನೇ ರಹದಾರಿ ಮಾಡಿಕೊಂಡು ಈ ರಸ್ತೆಯನ್ನು ದನಸಾಗಾಟಕ್ಕೆ ಬಳಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಮೊದಲಿನಿಂದಲೂ ಇಲ್ಲಿ ರಾತ್ರಿಯ ವೇಳೆಗೆ ಹಲವಾರು ವಾಹನಗಳು ಸಂಚಾರ ಸಂಚರಿಸುವುದ್ನು ಗಮನಿಸಿದ್ದೇವೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಕಂಡುಬಂದಿರುವ ಹಸುಗಳು ಎಲ್ಲಿಂದಲೋ ಹಟ್ಟಿಯಿಂದ ಕದ್ದುಕೊಂಡು ಬಂದಿರುವಂತೆ ಕಂಡುಬರುತ್ತಿದ್ದು, ಅದು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅದನ್ನು ಅಲ್ಲೇ ಎಸೆದು ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಹಸುಗಳ ಕಾಲುಗಳು ತುಂಡಾಗಿರುವುದು ಇದನ್ನು ಪುಷ್ಠೀಕರಿಸುತ್ತಿದೆ. ಪಂಚಾಯತ್ ಸದಸ್ಯ ಮಾಧವ ಅವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ. ಮರಣೋತ್ತರ ವರದಿಗಾಗಿ ಕಾಯಲಾಗುತ್ತಿದ್ದು, ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ







