ಬಂಟ್ವಾಳ: ಮಸೀದಿಯ ಕಾರ್ಯ ದರ್ಶಿಯೋರ್ವರು ಡೆತ್ನೋಟ್ ಬರೆದಿಟ್ಟು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕರಿಯಂಗಳ ಗ್ರಾಮ ಪೊಳಲಿಯ ಬಾಬಾ ಫಕ್ರುದ್ದೀನ್ ಜುಮಾ ಮಸೀದಿಯಲ್ಲಿ ನಡೆದಿದೆ. ಆ ಮಸೀದಿಯ ಆಡಳಿತ ಮಂಡಳಿ ಕಾರ್ಯದರ್ಶಿ ಇಮ್ತಿಯಾಝ್(25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ್ಮಹತ್ಯೆ ಮಾಡುವ ಮುಂಚೆ ತನ್ನ ಆತ್ಮಹತ್ಯೆಗೆ ಮಸೀದಿಯ ಉಪಾಧ್ಯಕ್ಷ ಪುಂಚಮೆ ನಿವಾಸಿ ಷರೀಫ್ ಎಂಬಾತನೇ ಕಾರಣ ಎಂದು ಡೆತ್ನೋಟ್ ಬರೆದಿಟ್ಟಿದ್ದಾರೆ.

ಡೆತ್ನೋಟಲ್ಲಿರುವುದೇನು?
`ನನ್ನ ಸಾವಿಗೆ ಷರೀಫ್ ಕಾರಣ. ನನ್ನಿಂದ 1.50 ಲಕ್ಷ ರೂ. ಪಡೆದು ವಾಪಸ್ ಕೊಡಲಿಲ್ಲ ಎಂದು ಹೇಳಿ ಮರ್ಯಾದೆ ತೆಗೆದಿದ್ದಾನೆ. ನನಗೆ ಮರ್ಯಾದೆ ಮುಖ್ಯ, ನಾನು ಇದುವರೆಗೂ ಯಾರಿಗೂ ಅನ್ಯಾಯ ಮಾಡಿದವನಲ್ಲ ಮತ್ತು ಮಸೀದಿ ಅಡ್ಡೂರಿನ ಪೊಳಲಿಯ ಎಲ್ಲಾ ಜಾಗದ ರೆಕಾರ್ಡ್ ಅವನು ಪಡೆದುಕೊಂಡಿದ್ದು ತೀರ್ಮಾನಿಸಿ ಆಯಿತು. ವಾಪಸ್ ಕೊಡಲಿಲ್ಲ. ವಿಷಯ ಜಿ. ಅಜೀದನಿಗೆ ಗೊತ್ತುಂಟು. ನಾನು ಕೊಟ್ಟ ಹಣ ಅವನಿಂದ ತೆಗೆಸಿಕೊಡಿ. ಜಮಾತರೆ ಬಿಡಬೇಡಿ ತೆಗೆಸಿಕೊಡಿ. ನನಗೆ ಜೀವ ಮುಖ್ಯವಲ್ಲ, ಮರ್ಯಾದೆ ಮುಖ್ಯ. ನನಗೆ ದಾರಿಯಲ್ಲಿ ನಡೆಯುವಾಗ ಎಲ್ಲರೂ ತಮಾಷೆ ಮಾಡುತ್ತಾರೆ. ನನಗೆ ಸಹಿಸಲು ಆಗಲಿಲ್ಲ…’ (ಡೆತ್ನೋಟ್ನಲ್ಲಿದ್ದ ಯಥಾವತ್ ಬರಹ)
ಹಿನ್ನೆಲೆ: ಇಮ್ತಿಯಾಝ್ ಮಸೀದಿಯಲ್ಲಿ ಸುಮಾರು 1.50 ಲಕ್ಷ ರೂ. ಅವ್ಯಹಾರ ಮಾಡಿದ್ದಾನೆಂದು ಆರೋಪಿಸಿ ಉಪಾಧ್ಯಕ್ಷ ಷರೀಫ್ ಹಾಗೂ ಇತರ ಪದಾಧಿಕಾರಿಗಳು ಪತ್ರ ತಯಾರಿಸಿದ್ದರು ಎನ್ನಲಾಗಿದೆ. ಅಲ್ಲದೆ ಈ ಬಗ್ಗೆ ಮಸೀದಿಯ ಅಧ್ಯಕ್ಷರಲ್ಲೂ ಷರೀಫ್ ಆಗಾಗ ಪ್ರಸ್ತಾಪಿಸುತ್ತಿದ್ದ ಎನ್ನಲಾಗಿದೆ. ಇದಕ್ಕಾಗಿ ನಿನ್ನೆ ಮಧ್ಯಾಹ್ನ ಮಸೀದಿಯಲ್ಲಿ ಮೀಟಿಂಗ್ ಕರೆಯಲಾಗಿತ್ತು. ಇದರಿಂದ ಮರ್ಯಾದೆಗೆ ಅಂಜಿದ ಇಮ್ತಿಯಾಜ್ ಮಸೀದಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ಡೆತ್ನೋಟಿನಿಂದ ಬಯಲಾಗಿದೆ.
ಷರೀಫ್ಗೆ ಗೂಸಾ: ಇಮ್ತಿಯಾಝ್ ಆತ್ಮಹತ್ಯೆ ಪ್ರಕರಣ ಬಯಲಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಾರ್ವಜನಿಕರು ಷರೀಫ್ಗೆ ಗೂಸಾ ನೀಡಿದ್ದಾರೆನ್ನಲಾಗಿದೆ. ಕೊನೆಗೆ ಮಸೀದಿಯ ಸದಸ್ಯರು ಷರೀಫ್ನನ್ನು ಮಸೀದಿಯ ಒಳಗೆ ಬಚ್ಚಿಟ್ಟುಕೊಳ್ಳಲು ಹೇಳಿ ಕೊನೆಗೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ಒಪ್ಪಿಸಿದ್ದಾರೆನ್ನಲಾಗಿದೆ. ಗ್ರಾಮಾಂತರ ಠಾಣೆಯ ಅಧಿಕಾರಿ ರಕ್ಷಿತ್, ಸರ್ಕಲ್ ಇನ್ಸ್ಪೆಕ್ಟರ್ ಬೆಳ್ಳಿಯಪ್ಪ ಹಾಗೂ ಇತರರು ಸ್ಥಳಕ್ಕಾಗಮಿಸಿದ್ದರು.

