ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ಸರ್ಕಲ್ ಬಳಿ ಗುರುವಾರ ಸಂಜೆ ಸಂಭವಿಸಿದ ಬೀಕರ ರಸ್ತೆ ಅಪಘಾತ ಪ್ರಕರಣದಲ್ಲಿ ಮೃತರ ಸಂಖ್ಯೆ ಎರಡಕ್ಕೇರಿದ್ದು ಮರದ ಕೆಲಸದ ಕಾರ್ಮಿಕನ ಜೊತೆಗಿದ್ದ ಸವಾರ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿವೇಳೆ ಕೊನೆಯುಸಿರೆಳೆದ್

ಬೈಕ್ ಸಹಸವಾರ, ಕಾರ್ಪೇಂಟರ್ ಯಶವಂತ ಕುಲಾಲ್ ನಾಯಿಲ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರೆ ಇವರ ಹತ್ತಿರದ ಸಂಬಂಧಿಯು ಆಗಿದ್ದ ಸವಾರ ದಯಾನಂದ ಕುಲಾಲ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಟಿಪ್ಪರ್ ಲಾರಿ ಹಾಗೂ ಆಕ್ಟಿವಾ ದ್ವಿಚಕ್ರ ವಾಹನದ ನಡುವೆ ಈ ಅಪಘಾತ ಸಂಭವಿಸಿ,ಸವಾರರಿಬ್ಬರು ಗಂಭೀರ ಸ್ವರೂಪದ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದರು.ಇವರಿಬ್ಬರು ಕೂಡ ತಾಲೂಕಿನ ನರಿಕೊಂಬುಗ್ರಾಮದ ನಾಯಿಲ ನಿವಾಸಿಗಳಾಗಿದ್ದು,ಹತ್ತಿರದ ಸಂಬಂಧಿಗಳು ಕೂಡ ಆಗಿದ್ದಾರೆನ್ನಲಾಗಿದೆ.
ಮರದ ಕೆಲಸ ಮಾಡುವ ಯಶವಂತ ಅವರ ಮನೆಯ ದುರಸ್ಥಿ ಕೆಲಸ ನಡೆಯುತ್ತಿದ್ದು,ಬಿ.ಸಿ.ರೋಡಿನ ಅಂಗಡಿಯೊಂದಕ್ಕೆ ಅಗಮಿಸಿ,ಅಲ್ಲಿಂದ ಬಂಟ್ವಾಳದ ಜಕ್ರಿಬೆಟ್ಟಿನಲ್ಲಿರುವ ಮರದ ಮಿಲ್ಲಿಗೆ ಅಲ್ಲಿಂದ ವಾಪಾಸ್ ಬರುವಾಗ ಬಿ.ಸಿ.ರೋಡು ನಾರಾಯಣ ಗುರು ವೃತ್ತದ ಬಳಿ ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಆಕ್ಟಿವಾ ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಂಭೀರಗಾಯಗೊಂಡು ಬಲಿಯಾಗಿದ್ದಾರೆ.
ವೃತ್ತದ ಬಳಿ ಪೊಲೀಸರು;
ಮೊದಲೇ ಅಪಘಾತ ವಲಯವಾಗಿರುವ ಬಿ.ಸಿ.ರೋಡು ಸರ್ಕಲ್ ಬಳಿ ಬಂಟ್ವಾಳ ಸಂಚಾರಿ ಪೊಲೀಸರು ಬೆಳಿಗ್ಗೆ ,ಸಂಜೆ ವಾಹನ ತಪಾಸಣೆ ನಡೆಸುತ್ತಿದ್ದು,ಹೆಚ್ಚಾಗಿ ದ್ವಿಚಕ್ರವಾಹನ ಸವಾರರನ್ನೇ ಟಾರ್ಗೆಟ್ ಮಾಡಿ ಇಲ್ಲಿ ಹೊಂಚುಹಾಕಿಕೊಂಡು ಸಂಚಾರಿ ಪೊಲೀಸರು ತಪಾಸಣೆ ನಿಲ್ಲುತ್ತಾರೆ.


ಘಟನೆಯಾಗುತ್ತಿದ್ದಂತೆ ಜನರು ಜಮಾಯಿಸಿದ್ದು,ಅದಾಗಲೇ ದಂಡ ವಸುಲಿಯಲ್ಲಿ ನಿರತರಾಗಿದ್ದ ಸಂಚಾರಿ ಪೊಲೀಸರ ವಿರುದ್ದ ಆಕ್ರೋಶವು ವ್ಯಕ್ತವಾಗಿತ್ತಿದ್ದಂತೆ ಸಂಚಾರಿ ಪೊಲೀಸರು ಸ್ಥಳದಿಂದ ತೆರಳಿದ್ದರೆಂದು ಪ್ರತ್ಯಕ್ಷ ದರ್ಶಿಗಳು ದೂರಿದ್ದಾರೆ. ಬಳಿಕ ಸುದ್ದಿ ತಿಳಿದ ಸಂಚಾರಿ ಠಾಣೆಯ ಎಸ್ ಐ ಮತ್ತವರ ಸಿಬ್ಬಂದಿಗಳು ಅಗಮಿಸಿ ಮುಂದಿನ ಪ್ರಕ್ರಿಯೆ ನಡೆಸಿದ್ದಾರೆ.
ಈ ಹಿಂದಿನಿಂದಲು ಸರ್ಕಲ್ ಬಳಿಯಲ್ಲೇ ನಿಂತು ವಾಹನ ತಪಾಸಣೆ ನಡೆಸಲಾಗುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತು ವಾಹನ ಚಾಲಕ ಸಮುದಾಯದಿಂದ ಆಕ್ಷೇಪ,ದೂರುಗಳ ಹಿನ್ನಲೆಯಲ್ಲಿ ಬಂಟ್ವಾಳ ಉಪವಿಭಾಗದ ಎಎಸ್ಪಿ ಯಶುಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನುಮುಂದಕ್ಜೆ ಸರ್ಕಲ್ ಸುತ್ತಮುತ್ತ ವಾಹನ ತಪಾಸಣೆ ನಡೆಸದಂತೆ ಟ್ರಾಫಿಕ್ ಎಸ್ ಐ ಅವರಿಗೂ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ಬಿಜೆಪಿ ಯುವ ಮೋರ್ಛವು ಶುಕ್ರವಾರ ಲಿಖಿತ ಮನವಿ ಸಲ್ಲಿಸಿ ಸರ್ಕಲ್ ಬಳಿ ವಾಹನ ತಪಾಸಣೆ ನಡೆಸದಂತೆ ಒತ್ತಾಯಿಸಿದೆ.
