ಇಸ್ಲಮಾಬಾದ್: ಎರಡು ದಿನಗಳ ಹಿಂದೆ ಪೇಶಾವರದ ಸೈನಿಕ ಶಾಲೆಯ 148 ಮುಗ್ಧ ಮಕ್ಕಳನ್ನು ಕೊಂದ ಪ್ರಕರಣ ಬಿಸಿಯಾಗಿರುವ ಬೆನ್ನಲ್ಲೇ ಪಾಕಿಸ್ತಾನದ ಕೋರ್ಟ್ 26/11ರ ಮುಂಬೈ ದಾಳಿಯ ರೂವಾರಿ ಲಷ್ಕರ್- ಈ-ತೊಯ್ಬಾ ಉಗ್ರಗಾಮಿ ಸಂಘಟನೆಯ ಕಮಾಂಡರ್ ಝಾಕಿ-ಉರ್-ರೆಹಮಾನ್-ಲಖ್ವಿ ಎಂಬಾತನಿಗೆ ಆಂಟಿ ಟರೆರ್ ಕೋರ್ಟ್ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.

2008ರ ನವೆಂಬರ 26ರಂದು ಮುಂಬೈ ದಾಳಿ ಮಾಡಲು ರೂಪುರೇಷೆ ಸಿದ್ಧಪಡಿಸಿದ್ದು ಇವನೇ ಎಂಬ ಆರೋಪ ಈತನ ಮೇಲಿದೆ. ನಂತರ ಈತನನ್ನು ಪಾಕಿಸ್ತಾನ ಬಂಧಿಸಿತ್ತು. ಇತ್ತೀಚೆಗೆ ಆತ ರಾವಲ್ಪಿಂಡಿಯ ಕೋರ್ಟ್ಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದ. ಈತನನ್ನು ವಿಚಾರಣೆಗೊಳಪಡಿಸಿದ್ದ ಪಾಕಿಸ್ತಾನದ ಭಯೋತ್ಪಾದನ ವಿಚರಣಾ ಕೋರ್ಟ್ ಈತನೊಂದಿಗೆ ಇನ್ನುಳಿದ ಆರು ಮಂದಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.
ಆರೋಪಿಗಳನ್ನು ರಾವಲ್ಪಿಂಡಿಯ ಅದಿಯಾಲಾ ಜೈಲಿನಲ್ಲಿ ಇರಿಸಲಾಗಿತ್ತು. ಈತನ ವಿರುದ್ಧ ಭಾರತ ಸ್ಪಷ್ಟ ಮುಂಬೈ ದಾಳಿ ನಡೆದ ಬಗ್ಗೆ ಪುರವೆ ಒದಗಿಸಿತ್ತು. ಮೊನ್ನೆ ನಡೆದ ಪೇಶಾವರ ದಾಳಿ ನಡೆದ ಬಳಿಕ ಉಗ್ರರಿಗೆ ಗಲ್ಲು ಎಂದು ಗುಲ್ಲೆಬ್ಬಿಸಿದ್ದ ಪಾಕಿಸ್ತಾನ ಇದೀಗ ಬಂಧಿತ ಭಯೋತ್ಪಾದಕರಿಗೆ ಜಾಮೀನು ನೀಡಿ ಇಡೀ ವಿಶ್ವದ ಖಂಡನೆಗೆ ಗುರಿಯಾಗಿದೆ.
ಈತನೊಂದಿಗೆ ಅಬ್ದುಲ್ ವಾಝಿದ್, ಮಝರ್ ಇಕ್ಬಾಲ್, ಹಮದ್ ಅಮಿನ್ ಸಾದಿಕ್, ಶಾಹಿದ್ ಜಮೀಲ್ ರಿಯಾಝ್, ಜಮೀಲ್ ಅಹ್ಮದ್ ಇವರೆಲ್ಲರೂ ಮುಂಬೈ ದಾಳಿಯ ರೂಪುರೇಷೆ ಸಿದ್ಧಪಡಿಸಿ ಭಯೋತ್ಪಾದಕರನ್ನು ಭಾರತಕ್ಕೆ ಅಟ್ಟಿದ್ದರು. ಇದರಿಂದಾಗಿ ಭಾರತದ 166 ಮಂದಿ ಸಾವನ್ನಪ್ಪಿದ್ದರು. ಆದರೆ ಇವರೆಲ್ಲರೂ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
