ಕೈಕಂಬ:ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆಯೊಂದು ಕುಸಿದ ಘಟನೆ ಮಂಗಳೂರು ತಾಲೂಕಿನ ಕುಪ್ಪೆಪದವು ಗ್ರಾಮ ಪಂಚಾಯತ್ ನ ಕಿಲೆಂಜಾರು ಗ್ರಾಮದ ಕೆಂಪುಗುಡ್ಡೆ ಎಂಬಲ್ಲಿ ಭಾನುವಾರ ತಡ ರಾತ್ರಿ ನಡೆದಿದ್ದು, ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ.

ಇಲ್ಲಿನ ನಿವಾಸಿ ಸೀತಾರಾಮ ಆಚಾರ್ಯ ಎಂಬವರ ಹೆಂಚಿನ ಮನೆಯ ಗೋಡೆ ಕುಸಿದಿದ್ದು, ಇಡೀ ಮನೆ ಅಪಾಯಕ್ಕೆ ಸಿಲುಕಿದೆ ಭಾನುವಾರ ತಡರಾತ್ರಿ ಏಕಾಏಕಿ ಮನೆಯ ಗೋಡೆ ಕುಸಿದಿದ್ದು, ಗೋಡೆ ಕುಸಿದ ಸದ್ದಿಗೆ ಎಚ್ಚರಗೊಂಡ ಮನೆಮಂದಿ ಮನೆಯಿಂದ ಹೊರಗೆ ಓಡಿ ಬಂದು ಬಚಾವಾಗಿದ್ದಾರೆ.ಮನೆಯವರು ತಾತ್ಕಾಲಿಕವಾಗಿ ಬೇರೆ ಮನೆಗೆ ಸ್ಥಳಾoತರವಾಗಿದ್ದಾರೆ. ಅಂದಾಜು ಮೂರು ಲಕ್ಷಕ್ಕೂ ಅಧಿಕ ನಷ್ಟವಾಗಿದ್ದು, ಮನೆ ನಿಧಾನಕ್ಕೆ ಕುಸಿಯುತ್ತಿದ್ದು, ಮಳೆ ಇದೇ ರೀತಿ ಮುಂದುವರಿದಲ್ಲಿ ಇನ್ನೆರಡು ದಿನದಲ್ಲಿ ಸಂಪೂರ್ಣ ಮನೆ ಧರಾಶಾಹಿಯಾಗಲಿದೆ.
ಕುಪ್ಪೆಪದವು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ ಮಂದೊಳಿಕರ, ಸದಸ್ಯರು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
