ಸಂಜೀವನಿ ಸೌಧ , ಸಂಜೀವಿನಿ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ
ಕೈಕಂಬ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಕರಿಯಂಗಳ ಗ್ರಾಮ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ ಪಂಚಾಯತ್ ವಠಾರದಲ್ಲಿ ನೂತನವಾಗಿ ನಿರ್ಮಿಸಲಾದ ಸಂಜೀವಿನಿ ಸೌಧ, ಸಂಜೀವಿನಿ ವಾಣಿಜ್ಯ ಸಂಕೀರ್ಣ(ಗ್ರಾಮ ಒನ್ ಸೇವಾ ಕೇಂದ್ರ ಮತ್ತು ಸಂಜೀವಿನಿ ಉತ್ಪನ್ನಗಳ ಮಾರಾಟ ಕೇಂದ್ರ), ವಿಶೇಷ ಚೇತನರ ಗ್ರಂಥಾಲಯ ಹಾಗೂ ಗ್ರಾಮ ಆಡಳಿತ ಅಧಿಕಾರಿ ಕಚೇರಿಯು ಜೂ. ೨೬ರಂದು ಗುರುವಾರ ಲೋಕಾರ್ಪಣೆಗೊಳಿಸಲಾಯಿತು.

ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಮಾತನಾಡಿ, ಸ್ವ-ಉದ್ಯೋಗ ಬಯಸುವ ಮಹಿಳೆಯರು ಕರಿಯಂಗಳ ಸಂಜೀವಿನಿ ವಾಣಿಜ್ಯ ಸಂಕೀರ್ಣದಿಂದ ಹೆಚ್ಚೆಚ್ಚು ಪ್ರಯೋಜನ ಪಡೆದುಕೊಳ್ಳಬೇಕು. ಕರಿಯಂಗಳ ಸ್ವಚ್ಛ ಮತ್ತು ವ್ಯಸನಮುಕ್ತ ಗ್ರಾಮವಾಗಬೇಕು ಎಂದು ಆಶಿಸಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಗ್ರಾಮ ಪಂಚಾಯತ್ಗಳಿಗೆ ಹೆಚ್ಚಿನ ಅಧಿಕಾರ ನೀಡಿರುವ ಕಾಂಗ್ರೆಸ್, ನರೇಗಾದಂತಹ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೊಳಿಸಿತ್ತು. ಕರಿಯಂಗಳ ಗ್ರಾಮದಲ್ಲೂ ಕಾಂಗ್ರೆಸ್ ಸರ್ಕಾರ ಹಲವು ಜನೋಪಕಾರಿ ಕೆಲಸ ನಡೆಸುತ್ತಾ ಬಂದಿದೆ ಅಭಿವೃದ್ಧಿ ಕೆಲಸಗಳ ಸಂದರ್ಭದಲ್ಲಿ ರಾಜಕೀಯ ಬದಿಗಿಟ್ಟು, ಎಲ್ಲರೂ ಗ್ರಾಮದ ಏಳಿಗೆಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಪೊಳಲಿಯ ಬಾಬಾ ಫಕ್ರುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ಅಝೀಝ್ ಮಾತನಾಡಿ, ನಾವು ಹೋಗುವ ದಾರಿ ಸ್ವಚ್ಛವಾಗಿರಬೇಕು. ಸ್ವಚ್ಛತೆ ಇದ್ದಲ್ಲಿ ಸಮಾಜ ಸುಂದರವಾಗಿರುತ್ತದೆ. ಯುವಜನಾಂಗಕ್ಕೆ ಮಾರಕವಾಗಿರುವ ಮಾದಕ ವ್ಯಸನದ ವಿರುದ್ಧ ಒಗ್ಗೂಡಿ ಹೋರಾಟ ನಡೆಸಿ, ಸೌಹಾರ್ದ ಸಮಾಜ ನಿರ್ಮಿಸೋಣ ಎಂದರು.
ಪಂಚಾಯತ್ ಅಧ್ಯಕ್ಷೆ ರಾಧಾ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಸಚಿನ್ ಕುಮಾರ್, ಪಂಚಾಯತ್ ಸದಸ್ಯರು, ಪಿಡಿಒ ವಸಂತಿ ಜೆಪಿ, ಬಂಟ್ವಾಳ ಕಿರಿಯ ತಾಂತ್ರಿಕ ಇಂಜಿನಿಯರ್ ಜಗದೀಶ್ಚಂದ್ರ, ನರೇಗಾದ ಸಹಾಯಕ ನಿರ್ದೇಶಕ ಸುಶಾನ್ ಬಿ. ಕೆ, ನಿವೃತ್ತ ಪಿಡಿಒ ಮಾಲಿನಿ ಬಿ. ವಿ, ಶ್ರೀ ಕ್ಷೇತ್ರ ಪೊಳಲಿಯ ಅರ್ಚಕ ರಾಮ ಭಟ್, ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟೇಶ ನಾವಡ, ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಪುತ್ತೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾಲೂಕು ಕ್ಲಸ್ಟರ್ ಮೇಲ್ವಿಚಾರಕಿ ಕುಸುಮಾ, ಪಂಚಾಯತ್ನ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಪಲ್ಲಿಪಾಡಿ , ಚಂದ್ರಶೇಖರ ಭಂಡಾರಿ, ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯರು, ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಸುಧಾಕ್ಷಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪಂಚಾಯತ್ನ ಸದಸ್ಯ ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿದರು. ಕಿಶೋರ್ ಪಲ್ಲಿಪಾಡಿ ನಿರೂಪಿಸಿದರು. ಪಂಚಾಯತ್ ಉಪಾಧ್ಯಕ್ಷ ರಾಜು ಕೋಟ್ಯಾನ್ ವಂದಿಸಿದರು.
